ADVERTISEMENT

ಕಲಬುರ್ಗಿ: ರಕ್ಷಣೆ ಕೋರಿ ಪೊಲೀಸರಿಗೆ ದಂಪತಿ ಮೊರೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 5:21 IST
Last Updated 5 ಫೆಬ್ರುವರಿ 2021, 5:21 IST

ಕಲಬುರ್ಗಿ: ‘ಪ್ರೇಮ ವಿವಾಹ ಮಾಡಿಕೊಂಡ ನಮಗೆ ಪಾಲಕರಿಂದ ಜೀವ ಬೆದರಿಕೆಯಿದ್ದು, ಸೂಕ್ತ ರಕ್ಷಣೆ ನೀಡಿ’ ಎಂದು ಕೋರಿ ನವದಂಪತಿ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಗೆ ಗುರುವಾರ ಮನವಿ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಯ್ಯಪ್ಪಸ್ವಾಮಿ ಹಾಗೂ ಕಲಬುರ್ಗಿಯ ಕಸ್ತೂರಿ ರಕ್ಷಣೆ ಕೋರಿದ ದಂಪತಿ. ಕಳೆದ ನವೆಂಬರ್‌ನಲ್ಲಿ ಇವರಿಬ್ಬರೂ ಮನೆಯವರ ವಿರೋಧದ ಮಧ್ಯೆಯೂ ಅಂತರ್ಜಾತಿ ವಿವಾಹವಾಗಿದ್ದಾರೆ.

ಇವರಿಬ್ಬರೂ ಮದುವೆಯಾದ ನಂತರ ಯುವತಿಯ ಪೋಷಕರುಕಲಬುರ್ಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಅಯ್ಯಪ್ಪಸ್ವಾಮಿ ಅವರ ತಂದೆ ಹಾಗೂ ತಾಯಿಯನ್ನು ಠಾಣೆಗೆ ಕರೆತಂದ ಪೊಲೀಸರು, ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕೆ ಮಹಿಳಾ ಠಾಣೆಯ ಸಿಪಿಐ ಸಂಗಮೇಶ ಪಾಟೀಲ ಮತ್ತು ಕಾನ್‌ಸ್ಟೆಬಲ್‌ ನೆಹರೂ ಸಿಂಗ್ ಎಂಬುವರನ್ನು ಅಮಾನತು ಮಾಡಲಾಗಿತ್ತು.

ADVERTISEMENT

ಹೈಕೋರ್ಟ್‌ ಎದುರು ಹಾಜರಾಗಿದ್ದ ನವವಿವಾಹಿತರಿಗೆ ಇಬ್ಬರೂ ವಯಸ್ಕರಾದ್ದರಿಂದ ಅವರ ಮದುವೆಯನ್ನು ಹೈಕೋರ್ಟ್ ಸಮ್ಮತಿಸಿತ್ತು.

‘ಪೊಲೀಸರು ಮತ್ತು ನನ್ನ ಪೋಷಕರಿಂದ ಕಿರುಕುಳ ಮುಂದುವರೆದಿದೆ. ದೂರವಾಣಿ ಕರೆ ಮಾಡಿ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರೇ ಹೆದರಿಸುತ್ತಿದ್ದಾರೆ. ನಮಗೆ ರಕ್ಷಣೆ ನೀಡಿ’ ಎಂದು ಎಂದು ಕಸ್ತೂರಿ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.