ADVERTISEMENT

ಕಲಬುರ್ಗಿ: ಮೂಲಸೌಲಭ್ಯ ವಂಚಿತ ಖಣದಾಳ

ರಸ್ತೆ, ಚರಂಡಿಯದ್ದೆ ಸಮಸ್ಯೆ; ಮಳೆ ಬಂದಾಗ ಮನೆಗಳಿಗೆ ನುಗ್ಗುವ ಕೊಳಚೆ ನೀರು

ಹನಮಂತ ಕೊಪ್ಪದ
Published 10 ಆಗಸ್ಟ್ 2021, 3:32 IST
Last Updated 10 ಆಗಸ್ಟ್ 2021, 3:32 IST
ಕಲಬುರ್ಗಿ ತಾಲ್ಲೂಕಿನ ಖಣದಾಳ ಗ್ರಾಮದಲ್ಲಿರುವ ಮಣ್ಣಿನ ಕಚ್ಚಾ ರಸ್ತೆ
ಕಲಬುರ್ಗಿ ತಾಲ್ಲೂಕಿನ ಖಣದಾಳ ಗ್ರಾಮದಲ್ಲಿರುವ ಮಣ್ಣಿನ ಕಚ್ಚಾ ರಸ್ತೆ   

ಕಲಬುರ್ಗಿ: ಮಣ್ಣಿನ ಕಚ್ಚಾ ರಸ್ತೆಗಳು, ಕಣ್ಣಿಗೆ ರಾಚುವ ದೂಳು, ಸ್ಲ್ಯಾಬ್ ಇಲ್ಲದ ಚರಂಡಿಗಳು, ದಾರಿಯುದ್ದಕ್ಕೂ ಹರಿಯುವ ಕೊಳಚೆ ನೀರು, ದುಸ್ಥಿತಿಯಲ್ಲಿರುವ ಸರ್ಕಾರಿ ಕಚೇರಿ ಕಟ್ಟಡಗಳು.

ತಾಲ್ಲೂಕಿನ ಖಣದಾಳ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಕಂಡು ಬರುವ ದೃಶ್ಯಗಳಿವು.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಖಣದಾಳ ಹಲವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಅಫಜಲಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಸುಮಾರು 12 ಸಾವಿರ ಜನಸಂಖ್ಯೆಯಿದೆ. 4 ಸಾವಿರ ಮತದಾರರಿದ್ದಾರೆ.

ADVERTISEMENT

ಅಂಗನವಾಡಿ ಕೇಂದ್ರ, ಸರ್ಕಾರಿ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹಲವು ಸೌಲಭ್ಯಗಳು ಇಲ್ಲಿವೆ. ಉತ್ತಮ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ. ಗ್ರಾಮದಲ್ಲಿ ಐತಿಹಾಸಿಕ ಹುಣಚೇಶ್ವರ ದೇವಸ್ಥಾನವಿದ್ದು, ಶ್ರದ್ಧಾಭಕ್ತಿಯ ಕೇಂದ್ರವಾಗಿ ಪರಿಣಮಿಸಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ತಾಂಡಾ ಇದ್ದು, ಬಂಜಾರಾ ಸಮುದಾಯದ ಶ್ರದ್ಧಾಕೇಂದ್ರಗಳು ಇಲ್ಲಿವೆ.

ಇಡೀ ಗ್ರಾಮ ಸುತ್ತು ಹಾಕಿದರೂ ಒಂದೇ ಒಂದು ಗುಣಮಟ್ಟದ ಸಿ.ಸಿ. ರಸ್ತೆಯೂ ಕಾಣಸಿಗುವುದಿಲ್ಲ. ಇಲ್ಲಿನ ಒಳರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ. ರಸ್ತೆಗಳು ಹದಗೆಟ್ಟಿದ್ದು, ತಗ್ಗುಗಳಿಂದ ಕೂಡಿವೆ. ಮಳೆ ಬಂದರಂತೂ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿ ಬಿಡುತ್ತವೆ. ಇಂಥ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದು ಇಲ್ಲಿನ ನಿವಾಸಿಗಳಿಗೆ ಕಷ್ಟಕರವಾಗಿದೆ.

ಇಲ್ಲಿನ ಚರಂಡಿಗಳಿಗೆ ಸ್ಲ್ಯಾಬ್ ಹಾಕಿಲ್ಲ. ಹೀಗಾಗಿ ಕೊಳಚೆ ನೀರಿನ ದುರ್ನಾತದಿಂದ ಜನರು ನಿತ್ಯ ಹಿಂಸೆ ಅಉಭವಿಸುವಂತಾಗಿದೆ. ಅಲ್ಲದೆ ಚರಂಡಿಗಳಲ್ಲಿ ಅಲ್ಲಲ್ಲಿ ಹೂಳು ತುಂಬಿಕೊಂಡ ಪರಿಣಾಮ ಕೊಳಚೆ ನೀರು ರಸ್ತೆ ಮೇಲೆ ಬಂದು ನಿಲ್ಲುತ್ತಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

ಪ್ರತಿ ವರ್ಷ ಧಾರಾಕಾರ ಮಳೆ ಬಂದಾಗಲೆಲ್ಲ ಇಲ್ಲಿನ ಕೆಳ ಪ್ರದೇಶದಲ್ಲಿರುವ ನಿವಾಸಿಗಳ ಗೋಳು ಹೇಳತೀರದು. ಕೊಳಚೆ ನೀರು ಮನೆಗಳಿಗೆ ನುಗ್ಗುವ ಕಾರಣ ಸಂಕಷ್ಟ ಅನುಭವಿಸುವಂತಾಗಿದೆ. ಈ ಕುರಿತು ಸಂಬಂಧಿಸಿದವರಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಪಾಳು ಬಿದ್ದ ಸಾಮೂಹಿಕ ಶೌಚಾಲಯ:ಗ್ರಾಮದಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣ ಸಾಕಾರವಾಗಿಲ್ಲ. ಇದರಿಂದ ಇಲ್ಲಿ ಬಹಿರ್ದೆಸೆ ಮುಂದುವರೆದಿದೆ. ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟಿರುವ ಸಾಮೂಹಿಕ ಶೌಚಾಲಯವಿದ್ದು, ನೀರಿನ ಸಂಪರ್ಕ ಇರದ ಕಾರಣ ಪಾಳು ಬಿದ್ದಿದೆ. ಸಂಬಂಧಪಟ್ಟವರು ದುರಸ್ತಿಗೆ ಕ್ರಮ ಕೈಗೊಂಡು ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ‘ಖಣದಾಳ’ ಗ್ರಾಮಸ್ಥರ ‘ಮನದಾಳ’ ಆಲಿಸಿ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಬೇಕು ಎಂಬುದು ಇಲ್ಲಿನ ಮುಖಂಡರ ಆಗ್ರಹವಾಗಿದೆ.

ಶವ ಸಂಸ್ಕಾರಕ್ಕೂ ಪರದಾಟ
ಖಣದಾಳ ಗ್ರಾಮದಲ್ಲಿ ರುದ್ರಭೂಮಿಯಿಲ್ಲ. ಇದರಿಂದಾಗಿ ಭೂರಹಿತ ಜನರು ಶವ ಸಂಸ್ಕಾರಕ್ಕೆ ಪರದಾಡುವಂತಾಗಿದೆ.

‘ಈ ಮುಂಚೆ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಜಮೀನೊಂದರದರಲ್ಲಿ ಶವ ಸಂಸ್ಕಾರ ಮಾಡುತ್ತಿದ್ದೇವು. ಆದರೆ ಖಾಸಗಿ ವ್ಯಕ್ತಿಯೊಬ್ಬರು ಜಾಗವನ್ನು ಅಕ್ರಮವಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಈಗ ಅಲ್ಲಿ ಸಂಸ್ಕಾರಕ್ಕೆ ಅನುಮತಿ ಕೊಡುತ್ತಿಲ್ಲ’ ಎನ್ನುವುದು ಗ್ರಾಮಸ್ಥರ ಆರೋಪ.

ಹೆಚ್ಚು ಜನಸಂಖ್ಯೆ ಹೊಂದಿರುವ ಖಣದಾಳ ಗ್ರಾಮದಲ್ಲಿ ರುದ್ರಭೂಮಿಗೆ ಸರ್ಕಾರ ಜಮೀನು ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

***
ಗ್ರಾಮದಲ್ಲಿ ರಸ್ತೆ, ಚರಂಡಿ ಸಮಸ್ಯೆ ಹೆಚ್ಚು ಕಾಡುತ್ತಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸೌಲಭ್ಯ ಒದಗಿಸಲು ಅಧಿಕಾರಿಗಳು ಗಮನ ಹರಿಸಬೇಕು.
- ವಿಶ್ವನಾಥ ಕೋಣಿನ, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.