ADVERTISEMENT

ಗಡಿಯಲ್ಲಿ ಪ್ರಯಾಣಿಕರಿಗೆ ಪರದಾಟ; ಕರ್ನಾಟಕ–ಮಹಾರಾಷ್ಟ್ರ ಬಸ್‌ ಓಡಾಟಕ್ಕೆ ಮೀನ ಮೇಷ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 5:27 IST
Last Updated 17 ಮಾರ್ಚ್ 2021, 5:27 IST
ಆಳಂದ ತಾಲ್ಲೂಕಿನ ಹಿರೋಳಿ ಗಡಿ ಚೆಕ್‌ಪೋಸ್ಟ್‌ಗಳಿಂದ ಕಾಲ್ನಡಿಗೆ ಮೂಲಕ ಗಡಿಯೊಳಗೆ ಆಗಮಿಸಿದ ಪ್ರಯಾಣಿಕರು
ಆಳಂದ ತಾಲ್ಲೂಕಿನ ಹಿರೋಳಿ ಗಡಿ ಚೆಕ್‌ಪೋಸ್ಟ್‌ಗಳಿಂದ ಕಾಲ್ನಡಿಗೆ ಮೂಲಕ ಗಡಿಯೊಳಗೆ ಆಗಮಿಸಿದ ಪ್ರಯಾಣಿಕರು   

ಆಳಂದ: ಕೋವಿಡ್‌– 19ರ ಸುರಕ್ಷತೆಯ ನೆಪದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗೊಂದಲದಿಂದ ಗಡಿಯಲ್ಲಿನ ಪ್ರಯಾಣಿಕರು ಪರದಾಡುವ ಪರಿಸ್ಥಿತಿಗೆ ಇನ್ನು ಪರಿಹಾರ ದೊರೆಯುತ್ತಿಲ್ಲ. ಇದರ ಮಧ್ಯ ಮಂಗಳವಾರ ಹಲವು ಗ್ರಾಮಗಳಿಗೆ ಬೆಳಗ್ಗೆ ಬಸ್‌ ಸಂಚಾರದಲ್ಲಿ ವಿಳಂಬವಾದ ಕಾರಣ ವಿದ್ಯಾರ್ಥಿಗಳು, ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಅಧಿಕೃತವಾಗಿ 2 ರಾಜ್ಯದ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿಲ್ಲ. ಆದರೆ ಕೇವಲ ಸಾರಿಗೆ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಎರಡು ಕಡೆಯಿಂದ ಬಸ್‌ ಸಂಚಾರ ಸ್ಥಗಿತಗೊಳಿ ಸಿರುವುದು ಕಂಡು ಬರುತ್ತಿದೆ.

ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್‌– 19 ನೆಗಟಿವ್ ವರದಿಗಿಂತ ಥರ್ಮಲ್‌ ಸ್ಕ್ರೀನಿಂಗ್‌ ತಪಾಸಣೆಗೆ ಮಾತ್ರ ಸೀಮಿತವಾಗಿದೆ.ಎರಡು ಗಡಿಯಿಂದ ಬರುವ, ಹೋಗುವ ಪ್ರಯಾಣಿಕರ ಸಂಖ್ಯೆಯ ಕಡಿಮೆಯಾಗಿಲ್ಲ.
ಆದರೆ ಪ್ರಯಾಣವು ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ.

ADVERTISEMENT

ನೆರೆಯ ಮಹಾರಾಷ್ಟ್ರದ ಮುಂಬೈ, ಪುಣೆ, ಸೋಲಾಪುರ, ಅಕ್ಕಲಕೋಟ, ಉಮರ್ಗಾ, ಲಾತೂರು ಪಟ್ಟಣಗಳಿಗೆ ಸಂಪರ್ಕವು ಅನಿವಾರ್ಯವಾಗಿದೆ. ಈ ಪಟ್ಟಣಗಳಿಗೆ ಆಳಂದ ತಾಲ್ಲೂಕಿನ ಹಿರೋಳಿ, ಖಜೂರಿ ಹಾಗೂ ನಿಂಬಾಳದ ಚೆಕ್‌ಪೋಸ್ಟ್‌ಗಳ ಮೂಲಕ ಖಾಸಗಿ ವಾಹನಗಳು ಪ್ರತಿದಿನ ಸಂಚರಿಸುತ್ತಿವೆ. ಆದರೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಮಾತ್ರ ಸ್ಥಗಿತಗೊಳಿಸಿವೆ. ಆದರೆ ರಾತ್ರಿ ಸಮಯದಲ್ಲಿ ಸಾರಿಗೆ ಸಂಸ್ಥೆಯ ಕೆಲ ಬಸ್‌ಗಳ ಓಡಾಟ ಕಂಡು ಬರುತ್ತಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರು ಅಕ್ಕಲಕೋಟ ತಾಲ್ಲೂಕಿನ ವಾಗ್ದರಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿವೆ. ಇದರಿಂದ ಆಳಂದ, ಕಲಬುರ್ಗಿಗೆ ತೆಳುವ ಪ್ರಯಾಣಿಕರು 3 ಕಿ.ಮೀ ದೂರದ ಹಿರೋಳಿ ಚೆಕ್‌ಪೋಸ್ಟ್‌ವರೆಗೆ ಕಾಲ್ನಡಿಗೆ ಮೂಲಕ ಆಗಮಿಸುವ ಅನಿವಾರ್ಯತೆ ಎದುರಾಗಿದೆ. ಖಾಸಗಿ ಜೀಪ್‌, ಕ್ಲೂಜರ್‌ಗಳಿಂದ ಅಧಿಕ ಹಣ ವಸೂಲಿಗೆ ಮುಂದಾಗಿವೆ. ಇತ್ತ ಆಳಂದದಿಂದ ಮಹಾರಾಷ್ಟ್ರದತ್ತ ತೆರಳುವ ಬಸ್‌ ಪ್ರಯಾಣಿಕರ ಸಂಕಟವು ಇದಕ್ಕೆ ಹೊರತು ಇಲ್ಲ.

ಹಿರೋಳಿ ಗಡಿ ಕೇಂದ್ರದವರೆಗೆ ಮಾತ್ರ ಬಸ್‌ ಸಂಚರಿಸುತ್ತಿವೆ. ಅಲ್ಲಿಂದ ಖಾಸಗಿ ವಾಹನ ಇಲ್ಲವೆ ಉರಿಯುವ ಬಿಸಿಲು ಮಧ್ಯದಲ್ಲಿ ಕಾಲ್ನಡಿಗೆಯಲ್ಲಿ ಹೋಗವುದು ತ್ರಾಸದಾಯಕವಾಗಿ ಪರಿಣಮಿಸಿದೆ.

‘ಪ್ರಯಾಣಿಕರ ಆರ್‌ಟಿಪಿಸಿಆರ್‌ ತಪಾಸಣೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಚೆಕ್‌ಪೋಸ್ಟ್‌ ಅಧಿಕಾರಿಗಳು ಎಲ್ಲ ಪ್ರಯಾಣಿಕರ ತಪಾಸಣೆ, ವರದಿ ನೆಪದಲ್ಲಿ ಮಹಾರಾಷ್ಟ್ರದ ಬಸ್‌ಗಳಿಗೆ ಗಡಿಯಲ್ಲಿ ವಾಪಸ್‌ ಕಳುಹಿಸುತ್ತಿದ್ದಾರೆ ಎಂಬ ಗಾಳಿ ಸುದ್ದಿಯು ಹರಡಿ ಎರಡು ಕಡೆಯ ಬಸ್‌ಗಳು ಸ್ಥಗಿತಗೊಳಿಸಲಾಗಿದೆ’
ಎಂದು ರಾಜಶೇಖರ ಹರಿಹರ ಎಂಬುವವರು ತಿಳಿಸಿದರು.

ಖಜೂರಿ ಗಡಿ ಚೆಕ್‌ಪೋಸ್ಟ್‌ ಮಾರ್ಗದಿಂದ ಬಸ್‌ ಓಡಾಟಕ್ಕೆ ಯಾವುದೇ ಅಡ್ಡಿ ಕಂಡು ಬರುತ್ತಿಲ್ಲ. ಸೋಲಾಪುರ ಮತ್ತು ಆಳಂದ ಬಸ್‌ ಘಟಕದ ಅಧಿಕಾರಿಗಳ ಸಂಪರ್ಕದ ಕೊರತೆಯು ಬಸ್‌ ಸ್ಥಗಿತಕ್ಕೆ ಕಾರಣವಾಗಿದ್ದು, ಇದರಿಂದ ಎರಡು ಕಡೆ ಪ್ರಯಾಣಿಕರ ಸಂಕಷ್ಟ ಅನುಭವಿಸುತ್ತಿದ್ದಾರೆ.

***

70ಕ್ಕೂ ಸಾರಿಗೆ ಸಿಬ್ಬಂದಿ ಕಾರ್ಯ ನಿಯೋಜನೆ ನಿಮಿತ್ತ ಮಂಗಳವಾರ ಬಸ್‌ ಸಂಚಾರ ವಿಳಂಬವಾಗಿದೆ. ನಿಗದಿತ ವೇಳಾಪಟ್ಟಿಯಂತೆ ತಾಲ್ಲೂಕಿನಲ್ಲಿ ಬಸ್‌ ಸಂಚಾರ ಮುಂದುವರಿಯಲಿದೆ

- ಈಶ್ವರ ಪರೀಟ, ಬಸ್‌ ವ್ಯವಸ್ಥಾಪಕ, ಆಳಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.