ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಮಂದಿರ ಪ್ರವೇಶ ನಿಷೇಧವನ್ನು ಜುಲೈ 6ರವರೆಗೆ ಮುಂದುವರಿಸಲಾಗಿದೆ.
ಲಾಕ್ಡೌನ್ ತೆರವುಗೊಂಡ ನಂತರ ಜೂನ್ 8ರಂದು ಎಲ್ಲ ದೇವಸ್ಥಾನಗಳ ಪ್ರವೇಶಕ್ಕೂ ಅವಕಾಶ ನೀಡಲಾಗಿದ್ದು, ದೇವಲ ಗಾಣಗಾಪುರಕ್ಕೆ ಮಾತ್ರ ನಿಷೇಧ ಮುಂದುವರಿಸಲಾಗಿತ್ತು. ದತ್ತಾತ್ರೇಯ ಸ್ವಾಮಿಗೆ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರದ ಭಕ್ತರೇ ಹೆಚ್ಚಾಗಿದ್ದಾರೆ. ಅಲ್ಲಿ ಕೊರೊನಾ ವೈರಾಣು ಉಪಟಳ ವಿಪರೀತವಾದ ಕಾರಣ, ಸುರಕ್ಷತೆಯ ದೃಷ್ಟಿಯಿಂದ ಜೂನ್ 22ರವರೆಗೆ ನಿಷೇಧ ಮುಂದುವರಿಸಲಾಗಿತ್ತು.
ಜುಲೈ 5ರಂದು ಗುರುಪೂರ್ಣಿಮೆ ಉತ್ಸವ ಇದೆ. ಇದಕ್ಕಾಗಿ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ಮೂಲೆಮೂಲೆಗಳಿಂದಲೂ ಭಕ್ತರು ಬರುತ್ತಾರೆ. ಅಕ್ಕಪಕ್ಕದ ರಾಜ್ಯಗಳು ಹಾಗೂ ನೆರೆ ಜಿಲ್ಲೆಗಳ ಸಾವಿರಾರು ಜನ ಮೂರು ದಿನ ಹಗಲು– ರಾತ್ರಿ ದೇವಸ್ಥಾನ ಆವರಣದಲ್ಲೇ ಕಳೆಯುವುದು ವಾಡಿಕೆ. ಜನಸಂದಣಿ ಹೆಚ್ಚಾಗುವ ಕಾರಣ, ಕೊರೊನಾ ವೈರಾಣು ಹಬ್ಬುವ ಸಾಧ್ಯತೆ ಹೆಚ್ಚು. ಹಾಗಾಗಿ, ಇನ್ನಷ್ಟು ದಿನ ದರ್ಶನಕ್ಕೆ ಅವಕಾಶ ನೀಡುವುದು ಬೇಡ ಎಂದು ಸ್ವತಃ ಗ್ರಾಮಸ್ಥರೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಇದನ್ನು ಪರಿಗಣಿಸಿ, ಜುಲೈ 6ರವರೆಗೂ ದತ್ತಾತ್ರೇಯ ದರ್ಶನಕ್ಕೆ ಯಾರೂ ಬರದಂತೆ ಜಿಲ್ಲಾಡಳಿತ ಮಂಗಳವಾರ ಆದೇಶ ಹೊರಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.