ಕಲಬುರ್ಗಿ: ಇಲ್ಲಿಯ ಹೈಕೋರ್ಟ್ ಬಳಿಯ ಹೀರಾಪುರ ನಗರ ಆರೋಗ್ಯ ಕೇಂದ್ರಕ್ಕೆ ಬಂದ ಲಸಿಕೆಯನ್ನು ಸಮೀಪದ ಅಪಾರ್ಟ್ಮೆಂಟ್ಗೆ ಸಾಗಿಸಿ ಅಲ್ಲಿನ ನಿವಾಸಿಗಳಿಗೆ ಕೊಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೋವಿನ್ ಆ್ಯಪ್ನಲ್ಲಿ ನೋಂದಾ ಯಿಸಿ ಕೊಂಡ ಬಡಾವಣೆಯ ನಾಗರಿಕರು ಗುರುವಾರ ಬೆಳಿಗ್ಗೆಯಿಂದಲೇ ಆರೋಗ್ಯ ಕೇಂದ್ರದ ಎದುರು ಸಾಲುಗಟ್ಟಿ ನಿಂತಿದ್ದರು. ಸಾಲಿನಲ್ಲಿ ನಿಂತ ಎಲ್ಲರಿಗೂ ಲಸಿಕೆ ಸಿಗಲಿದೆ ಎಂಬ ಆಶಾಭಾವನೆಯಲ್ಲಿದ್ದವರನ್ನು ಏಕಾಏಕಿ ‘ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಭ್ಯವಿಲ್ಲ’ ಎಂಬ ಫಲಕ ಗಾಬರಿ ಮೂಡಿಸಿತು. ಈ ಬಗ್ಗೆ ಪ್ರಶ್ನಿಸಿದರೆ ಯಾರೊಬ್ಬರೂ ಸೂಕ್ತ ಉತ್ತರ ಕೊಡಲಿಲ್ಲ ಎಂದು ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದ ಸಂತೋಷ ಮೇಲ್ಮನಿ ಆರೋಪಿಸಿದರು.
‘ಸಾಮಾನ್ಯವಾಗಿ ಲಸಿಕೆಗಳನ್ನು ಆ್ಯಪ್ನಲ್ಲಿ ನೋಂದಾಯಿಸಿ ಕಾಯುತ್ತಿದ್ದ ವರಿಗೆ ಕೊಡಬೇಕು. ಆದರೆ, ಇಲ್ಲಿದ್ದ ಲಸಿಕೆಗಳನ್ನು ಅಕ್ರಮವಾಗಿ ಹಿರಿಯ ಅಧಿಕಾರಿಯೊಬ್ಬರ ಸೂಚನೆ ಮೇರೆಗೆ ಸಮೀಪದಲ್ಲಿರುವ ಅಪಾರ್ಟ್ಮೆಂಟ್ಗೆ ಸಾಗಿಸಲಾಗಿದೆ ಎಂಬ ಮಾಹಿತಿ ಇದೆ. ಹೀಗಾದರೆ ಬಡ ರೋಗಿಗಳ ಗತಿ ಯೇನು’ ಎಂದು ಅವರು ಪ್ರಶ್ನಿಸಿದರು.
ನೂಕುನುಗ್ಗಲು: ಮತ್ತೊಂದೆಡೆ ಮಾಣಿಕೇಶ್ವರಿ ನಗರದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಸರತಿ ಸಾಲು ಕಂಡು ಬಂತು. ಒಂದು ಹಂತದಲ್ಲಿ ನೂಕುನುಗ್ಗಲೂ ಉಂಟಾಗಿತ್ತು. ಜನರನ್ನು ಸಾಲಾಗಿ ನಿಲ್ಲಿಸಲು ಆರೋಗ್ಯ ಕೇಂದ್ರದ ಸಿಬ್ಬಂದಿ ಪ್ರಯಾಸ ಪಡಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.