ಆಳಂದ: ಸಮೀಪದ ಸುಕ್ಷೇತ್ರ ಹಾರಕೂಡದಲ್ಲಿ ಚೆನ್ನಬಸವ ಶಿವಯೋಗಿಗಳ 68ನೇ ಜಾತ್ರಾ ಮಹೋತ್ಸವವು ಡಿ.31ರಿಂದ ಮೂರು ದಿನ ನಡೆಯಲಿದೆ
ಆಳಂದ ಸೇರಿದಂತೆ ಜಿಲ್ಲೆಯಲ್ಲಿ ಅತಿ ಹೆಚ್ಚು ಭಕ್ತ ಸಮೂಹ ಹೊಂದಿರುವ ಹಾರಕೂಡ ಮಠದ ಜಾತ್ರೆಯು ವಿಶೇಷವಾದುದು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಡಿ.31ರಂದು ಬೆಳಿಗ್ಗೆ ಪೂಜೆ, ರುದ್ರಾಭಿಷೇಕ ನಡೆಯಲಿದೆ. ಸಂಜೆ 4ಕ್ಕೆ ಪಲ್ಲಕ್ಕಿ ಉತ್ಸವ, ನಂದಿಕೋಲ, ಕುಂಭ ಕಲಶ ಮೆರವಣಿಗೆ ಹಾಗೂ ಸಂಜೆ 6ಕ್ಕೆ ಮಹಾ ರಥೋತ್ಸವ ಜರುಗಲಿದೆ.
ಸಂಜೆ 7ಕ್ಕೆ ಶಿವಾನುಭವ ಚಿಂತನ ಕಾರ್ಯಕ್ರಮ ನಡೆಯಲಿದೆ. ಜಿಡಗಾ ಮಠದ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಸೋಲಾಪುರ ಸಂಸದ ಡಾ.ಜಯಸಿದ್ದೇಶ್ವರ ಶಿವಾಚಾರ್ಯ, ಶಾಸಕ ಬಿ.ನಾರಾಯಣ ರಾವ, ಸಂಸದ ಭಗವಂತರಾವ ಖೂಬಾ, ಶಾಸಕರಾದ ರಾಜಶೇಖರ ಪಾಟೀಲ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ಕಲಬುರ್ಗಿ ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಬಸವ ಕಲ್ಯಾಣ ಜಿ.ಪಂ ಅಧ್ಯಕ್ಷೆ ಯಶೋಧಾ ರಾಠೋಡ ಉಪಸ್ಥಿತರಿರುವರು.
ಜ.1ರಂದು ಜಂಗೀ ಪೈಲ್ವಾನರ ಕುಸ್ತಿ ಪಂದ್ಯಾಟಗಳು ನಡೆಯಲಿವೆ. ಹಿರೇನಾಗಾಂವನ ಜಯಶಾಂತಲಿಂಗ ಸ್ವಾಮೀಜಿ, ಗಡಿಗೌಡಗಾಂವನ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಧಾನ ಪರಿಷರತ್ ಸದಸ್ಯ ವಿಜಯಸಿಂಗ್ ಕುಸ್ತಿ ಪಂದ್ಯಾಟ ಉದ್ಘಾಟಿಸುವರು. ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕರಾದ ಬಸವರಾಜ ಪಾಟೀಲ ಅಟ್ಟೂರು, ರೇವೂ ನಾಯಕ, ಬಿ.ಆರ್.ಪಾಟೀಲ, ಮಲ್ಲಿಕಾರ್ಜುನ ಖುಬಾ, ಎಂ.ಜಿ ಮುಳೆ ಪಾಲ್ಗೊಳ್ಳುವರು.
ಜ.2ರಂದು ಬೆಳಿಗ್ಗೆ 11ಕ್ಕೆ ರಾಸುಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ ನಡೆಯಲಿದೆ. ನಂತರ ಗೀಗೀ ಪದ ಗಾಯನ, ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ಜಾತ್ರಾ ಸಮಿತಿ ಸಂಚಾಲಕ ಅಪ್ಪರಾವ ಕಣ್ಣೂರು, ಗುರುಲಿಂಗಯ್ಯ ಸ್ವಾಮಿ ನರೋಣಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.