ADVERTISEMENT

ಸಾಮಾಜಿಕ ತಲ್ಲಣಗಳಿಗೆ ಕಾವ್ಯ ಸ್ಪಂದಿಸಲಿ: ಮಧು ನಾಯ್ಕ

ಅಂತರ್ಜಾಲ ಕವಿ– ಕಾವ್ಯ– ಕಮ್ಮಟ ಕಾರ್ಯಕ್ರಮದಲ್ಲಿ 28 ಕವಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:55 IST
Last Updated 13 ಜೂನ್ 2021, 3:55 IST
ಮಧು ನಾಯ್ಕ
ಮಧು ನಾಯ್ಕ   

ಕಲಬುರ್ಗಿ: ‘ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಸೂಚಿಸುವ ಹಾಗೂ ತಲ್ಲಣಗಳಿಗೆ ಸ್ಪಂದಿಸುವ ಗುಣ ಯುವ ಕವಿಗಳಲ್ಲಿ ಬರಬೇಕು’ ಎಂದು ರಾಜ್ಯ ಬರಹಗಾರರ ಬಳಗ ಅಧ್ಯಕ್ಷ ಮಧು ನಾಯ್ಕ ಲಂಬಾಣಿ ಹೇಳಿದರು.

ಬರಹಗಾರರ ಬಳಗದ ಜಿಲ್ಲಾ ಘಟಕ ಶುಕ್ರವಾರ ಏರ್ಪಡಿಸಿದ್ದ ಅಂತರ್ಜಾಲ ಕವಿ– ಕಾವ್ಯ– ಕಮ್ಮಟ ಕಾರ್ಯಕ್ರಮದಲ್ಲಿ ಅವರು ಆಶಯ ನುಡಿಗಳನ್ನಾಡಿದರು.

‘ಇಂದಿನ ಉದಯೋನ್ಮುಖ ಬರಹಗಾರರು ತಮ್ಮ ಕಾವ್ಯ ಕಟ್ಟುವ ಶೈಲಯಲ್ಲಿ ಸಾಮಾಜಿಕ ತುಡಿತಗಳಿರಬೇಕು. ತಾವು ವಾಸಿಸುವ ಪರಿಸರದಲ್ಲಿನ ವಿಷಯ ವಸ್ತುವನ್ನೇ ಕಾವ್ಯ ರೂಪಕ್ಕೆ ಇಳಿಸಿದಾಗ ಅದು ಗಟ್ಟಿಯಾಗಿ ನಿಲ್ಲಲು ಸಾಧ್ಯ. ಪ್ರತಿಭಾವಂತ ಕವಿಗಳು ಹೆಚ್ಚಾಗಿ ಕಾವ್ಯದ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವುದು ಖುಷಿ ತರುತ್ತಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಕಲ್ಲಿನಲ್ಲಿ ಕಾವ್ಯ ಅರಳಿಸುವ ಪ್ರತಿಭೆಗಳಿವೆ. ಹೊಸ ತಲೆಮಾರಿನ ಕವಿಗಳು ಉತ್ತಮ ಸಾಹಿತ್ಯ ರಚನೆ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ADVERTISEMENT

ಈ ಅಂತರ್ಜಾಲ ಕಮ್ಮಟದಲ್ಲಿ ಒಟ್ಟು 28 ಕವಿಗಳು ಸ್ವರಚಿತ ಕವನ ವಾಚನ ಮಾಡಿದರು. ಅಧ್ಯಕ್ಷ ಮಹಾಂತೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವನಗಳನ್ನು ಬಳಗದ ಗಣ್ಯರಾದ ವಿರೂಪಾಕ್ಷಪ್ಪ, ಬಾರಾವಲಿ, ಮಹೇಶ ಎಸ್.ಎಚ್., ಖಂಡು ಬಜಾರ್ ಮತ್ತು ಧರ್ಮಣ್ಣ ಎಚ್ ಧನ್ನಿ ಅವರು ವಿಮರ್ಶೆ ಮಾಡಿದರು.

ಕಸ್ತೂರಬಾಯಿ, ರಾಜೇಶ್ವರ ಪ್ರಾರ್ಥನೆ ಗೀತೆ ಹಾಡಿದರು. ಶೈಲಜಾ ಪೋಮಾಜಿ ನಿರೂಪಿಸಿದರು. ಮಹಾಂತೇಶ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.