ಕಲಬುರ್ಗಿ: ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸಲು ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ಹಾಗೂ ತಿಂಗಳ ರಿಯಾಯಿತಿ ಪಾಸ್ ವಿತರಣಾ ಕೌಂಟರ್ಗಳನ್ನು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಆರಂಭಿಸಲಾಯಿತು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರ್ಗಿ ವಿಭಾಗ–2ರಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಆರಂಭಿಸಿದ ಕೌಂಟರ್ಗಳಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಡಿ.ಕೊಟ್ರಪ್ಪ ಹಾಗೂ ಉಪ ಮುಖ್ಯ ಲೆಕ್ಕಾಧಿಕಾರಿ ಶ್ರೀದೇವಿ ಚಾಲನೆ ನೀಡಿದರು. ಮೂರೂವರೆ ತಿಂಗಳ ಲಾಕ್ಡೌನ್ ಬಳಿಕ ಈ ಕೌಂಟರ್ಗಳನ್ನು ಇದೇ ಮೊದಲ ಬಾರಿಗೆ ತೆರೆಯಲಾಗುತ್ತಿದೆ.
ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲಿದೆ. ಇದು ಸಾಧ್ಯವಾಗದ ಹಲವರು ಬಸ್ ನಿಲ್ದಾಣಕ್ಕೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇ–ಪೇಮೆಂಟ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ.
ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ, ವಿಭಾಗೀಯ ಸಂಚಾರ ಅಧಿಕಾರಿ ಬೈಲಪ್ಪ ಬಿರಾದಾರ, ಲೆಕ್ಕಾಧಿಕಾರಿ ಮಹಾಂತೇಶ ಕರಾಳೆ, ಸಂಖ್ಯಾಧಿಕಾರಿ ಮಲ್ಲಿಕಾರ್ಜುನ ಜೋಗೂರ, ಆಡಳಿತಾಧಿಕಾರಿ ಗುರುಲಿಂಗಪ್ಪ ಪರುತಾಬಾದ್, ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ಧಣ್ಣ ಸಿಕೇದ ಕೋಳಕೂರ ಹಾಗೂ ಕಲಬುರ್ಗಿ ವಿಭಾಗದ ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.