ಕಲಬುರ್ಗಿ: ನಗರದಲ್ಲಿ ಭಾನುವಾರದ ಲಾಕ್ಡೌನ್ ಇದ್ದರೂ ಜನ ಸರಿಯಾಗಿ ಸ್ಪಂದಿಸಲಿಲ್ಲ. ಬಹುಪಾಲು ಮುಖ್ಯರಸ್ತೆಗಳಲ್ಲಿ ಬೈಕ್, ಕಾರ್, ಆಟೊಗಳ ಓಡಾಟ ಇತ್ತು.
ವ್ಯಾಪಾರ ವಹಿವಾಟು ಮಾತ್ರ ಬಂದ್ ಆಯಿತು. ವಾರದ 6 ದಿನ ಮಧ್ಯಾಹ್ನ 2ರವರೆಗೂ ವ್ಯಾಪಾರ ನಡೆಸಲು ಜಿಲ್ಲಾಧಿಕಾರಿ ಸಡಿಲಿಕೆ ನೀಡಿದ್ದರು. ಇದು ಭಾನುವಾರಕ್ಕೂ ಅನ್ವಯಿಸುತ್ತದೆ ಎಂದು ಕೆಲವು ಬೆಳಿಗ್ಗೆ ಅಂಗಡಿಗಳನ್ನು ತೆರೆದಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಂದ್ ಮಾಡಿಸಿದರು. ಇಲ್ಲಿನ ಗೋವಾ ಹೋಟೆಲ್ ಬಳಿಯ ಒಂದು ಕಟಿಂಗ್ ಸೆಲೂನಿನಲ್ಲಿ ಕೆಲವರು ಹೇರ್ ಕಟಿಂಗ್ ಮಾಡಿಸಿಕೊಂಡಿದ್ದೂ ಆಯಿತು. 11ರ ಸುಮಾರಿಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅನುಮಾನ ಬಂದು ನೋಡಿದಾಗ ಕ್ಷೌರಿಕ ಬಾಗಿಲು ಮುಚ್ಚಿ ಒಳಗಡೆ ಕೆಲಸ ಮಾಡುತ್ತಿದ್ದುದು ಕಂಡುಬಂತು. ತಕ್ಷಣ ಸೆಲೂನ್ ಬಂದ್ ಮಾಡಿಸಲಾಯಿತು.
ಬೈಕ್, ಆಟೊ, ಸೈಕಲ್ಗಳಲ್ಲಿ ರಸ್ತೆಗೆ ಬಂದ ಹಲವರಿಗೆ ಪೊಲೀಸರು ಲಾಠಿ ಏಟು ನೀಡಿದರು.
ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಮಳಿಗೆಗಳು ಮುಚ್ಚಿದ್ದರೂ ಜನರ ಓಡಾಟ ಸಾಮಾನ್ಯವಾಗಿತ್ತು. ಅಲ್ಲಲ್ಲಿ ಪೊಲೀಸ್ ವಾಹನಗಳು ಸೈರನ್ ಹಾಕಿಕೊಂಡು ಪಹರೆ ನಡೆಸಿದವು.
ಬಸ್ ನಿಲ್ದಾಣ, ಮುಸ್ಲಿಂ ಚೌಕ್, ಜಗತ್ ವೃತ್ತ, ಸೂಪರ್ ಮಾರ್ಕೆಟ್ ಮುಂತಾದೆಡೆ ಬೈಕ್, ಆಟೊಗಳಲ್ಲಿ ಔಡಾಡುತ್ತಿದ್ದವರಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು ವಾಹನಗಳನ್ನೂ ವಶಕ್ಕೆ ಪಡೆದರು.
ಸಕಾರಣವಿಲ್ಲದೇ ಹೊರಬಂದ ಹಲವರು ದಂಡ ಕಟ್ಟಬೇಕಾಯಿತು. ಔಷಧ, ಹಾಲು, ದಿನಸಿ ಹಾಗೂ ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ಸಾಧಾರಣವಾಗಿ ನಡೆಯಿತು. ಕೇಂದ್ರ ಬಸ್ ನಿಲ್ದಾಣ, ಎಸ್ ವಿ ಪಿ ವೃತ್ತ, ರಾಷ್ಟ್ರಪತಿ ಚೌಕ, ಜಗತ್ ಸರ್ಕಲ್ ಸೇರಿದಂತೆ ವಾಹನ ದಟ್ಟಣೆ ಇರುತ್ತಿದ್ದ ಸ್ಥಳಗಳಲ್ಲೂ ಪೊಲೀಸರು ಬೀಡು ಬಿಟ್ಟಿದ್ದರು.
ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್ ದರ್ಗಾ, ರಾಮ ಮಂದಿರ ಸೇರಿದಂತೆ ಎಲ್ಲ ದೇವಸ್ಥಾನ ಹಾಗೂ ಮಸೀದಿಗಳು ಬಾಗಿಲು ಮುಚ್ಚಿದ್ದವು.
ಹೈದರಾಬಾದ್, ಬೆಂಗಳೂರು ಹಾಗೂ ಇತರ ನಗರಗಳಿಂದ ಶನಿವಾರ ರಾತ್ರಿ ಹೊರಟಿದ್ದ ಬಸ್ ಗಳು ಭಾನುವಾರ ಬೆಳಿಗ್ಗೆ ಕಲಬುರ್ಗಿ ತಲುಪಿದವು.. ಇದರಲ್ಲಿ ಬಂದ ಪ್ರಯಾಣಿಕರು ಸ್ವಂತ ವಾಹನಗಳಲ್ಲಿ ಮನೆಗೆ ತೆರಳಬೆಕಾಯಿತು.
ಸಾರಿಗೆ ಸಂಸ್ಧೆ ಬಸ್, ಖಾಸಗಿ ಬಸ್ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿತ್ತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.