ADVERTISEMENT

ಸಾಹಿತಿಗೆ ಸಮಾಜಪರ ಕಾಳಜಿಯಿರಲಿ: ಎಚ್.ಟಿ.ಪೋತೆ

‘ಭೀಮ ಭಾರತ’ ಕವಿಗೋಷ್ಠಿಯಲ್ಲಿ ಪ್ರೊ. ಎಚ್.ಟಿ.ಪೋತೆ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 5:45 IST
Last Updated 12 ಏಪ್ರಿಲ್ 2022, 5:45 IST
ಕಲಬುರಗಿಯಲ್ಲಿ ಭಾನುವಾರ ನಡೆದ ‘ಭೀಮ ಭಾರತ’ ಕವಿಗೋಷ್ಠಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ ಎಚ್.ಟಿ.ಪೋತೆ ಮಾತನಾಡಿದರು
ಕಲಬುರಗಿಯಲ್ಲಿ ಭಾನುವಾರ ನಡೆದ ‘ಭೀಮ ಭಾರತ’ ಕವಿಗೋಷ್ಠಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ ಎಚ್.ಟಿ.ಪೋತೆ ಮಾತನಾಡಿದರು   

ಕಲಬುರಗಿ: ‘ಕವಿ, ಸಾಹಿತಿಗಳಿಗೆ ಸಹೃದಯತೆ ಮತ್ತು ಸಾಮಾಜಿಕ ಪ್ರಜ್ಞೆ ಇರಬೇಕಾದದ್ದು ತುಂಬಾ ಮುಖ್ಯ. ಸಮಾಜಪರ ಕಾಳಜಿ ಹೊಂದಿರಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ ಎಚ್.ಟಿ.ಪೋತೆ ಅಭಿಪ್ರಾಯಪಟ್ಟರು.

ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ವತಿಯಿಂದ ಭಾನುವಾರ ಕಲಾ ಮಂಡಳದಲ್ಲಿ ಆಯೋಜಿಸಲಾಗಿದ್ದ ‘ಭೀಮ ಭಾರತ’ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಡವರು, ಶೋಷಣೆಗೆ ಒಳಗಾದವರ ಪರ ಸಾಹಿತಿಗಳ ಮನಸ್ಸು ಮಿಡಿಯಬೇಕು. ಅವರ ಪರ ಧ್ವನಿಯೆತ್ತುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

‘ಕಣ್ಣೆದುರಿಗೆ ಶೋಷಣೆ, ಅನ್ಯಾಯ ನಡೆಯುತ್ತಿದ್ದರೂ ಲೇಖಕ ಮೌನವಾಗಿರುವುದು ಒಳ್ಳೆಯದ್ದಲ್ಲ. ವಾಸ್ತವಾಂಶವನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು’ ಎಂದರು.

ADVERTISEMENT

ಕವಿ ಎಸ್.ಪಿ. ಸುಳ್ಳದ ಮಾತನಾಡಿ, ‘ಗದ್ಯ ಮತ್ತು ಪದ್ಯ ಎರಡೂ ಭಿನ್ನ ಪ್ರಕಾರಗಳಾಗಿದ್ದು, ಬರಹದಲ್ಲಿ ಸಹಜತೆ ಇರಬೇಕು. ಕಾವ್ಯವು ಪದ್ಯದ ರೂಪದಲ್ಲೇ ಇರಬೇಕೆ ಹೊರತು ಗದ್ಯದ ಸ್ವರೂಪ ಪಡೆಯಬಾರದು’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಪ್ರಮುಖರಾದ ಕಾವ್ಯಶ್ರೀ ಮಹಾಗಾಂವಕರ್, ದತ್ತಾತ್ರೇಯ ಇಕ್ಕಳಕಿ, ಬಸಣ್ಣ ಸಿಂಗೆ, ಶಿವರಂಜನ್ ಸತ್ಯಂಪೇಟೆ ಇದ್ದರು. ಅಂಬೇಡ್ಕರ್ ಕುರಿತು 25ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.