ADVERTISEMENT

ಯುವಕನನ್ನು ಅಪಹರಿಸಿ ಕೊಲೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 6:36 IST
Last Updated 14 ಜುಲೈ 2023, 6:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಫಜಲಪುರ: ಯುವಕನನ್ನು ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದೇವಲಗಾಣಗಾಪುರ ಪೊಲೀಸರು ಬಂಧಿಸಿದ್ದು, ಪ್ರಕರಣವನ್ನು ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಗೆ ವರ್ಗಾಯಿಸಲಾಗಿದೆ.

ಕಲಬುರಗಿ ನಗರ ನಿವಾಸಿಗಳಾದ ನಿತೇಶ ಮೋಹನ ರಾಠೊಡ (33), ಪವನಕುಮಾರ ಪವಾರ್ ( 33) ಮತ್ತು ಸಂತೋಷ ಬಂಧಿತರು.

ಜೂ.25ರಂದು ಕಲಬುರಗಿ ನಗರದ ನಿವಾಸಿ ವಿಕ್ಕಿರಾಜ ಲಿಂಗೇರಿ ಎಂಬ ಯುವಕನನ್ನು ಕಾರಿನಲ್ಲಿ ಕರೆದೊಯ್ದು ಮಾರಕಾಸ್ತ್ರಗಳಿಂದ ಇರಿದಿದ್ದರು. ನಂತರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ಶವವನ್ನು ಅಫಜಲಪುರ ತಾಲ್ಲೂಕಿನ ಚಿಣಮಗೇರಾ ಗ್ರಾಮದ ರಸ್ತೆ ಪಕ್ಕದಲ್ಲಿ ಎಸೆದು ಪರಾರಿ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಚಿಕ್ಕಪ್ಪನ ಮಗನ ಪ್ರೇಮ ವಿವಾಹದ ಮಾತುಕತೆಯ ವೇಳೆ, ಹುಡುಗಿಯ ಮನೆಯವರ ವಿರುದ್ಧ ವಿಕ್ಕಿರಾಜು ಏರು ಧ್ವನಿಯಲ್ಲಿ ಮಾತಾಡಿದ್ದ. ಯುವತಿ ಸಂಬಂಧಿಗಳು ಆತನನ್ನು ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗಾಣಗಾಪುರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಿಳೆ ಕೊಲೆ ಆರೋಪಿಗಳ ಬಂಧನ: ಆಸ್ತಿ ವಿವಾದ ಸಂಬಂಧ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾದ ಪ್ರಕರಣದಡಿ ಮೂವರು ಆರೋಪಿಗಳನ್ನು ಸಬ್‌ಅರ್ಬನ್ ಪೊಲೀಸರು ಗುರುವಾರ ಬಂಧಿಸಿದರು.

ಸಿಂದಗಿ (ಬಿ) ಗ್ರಾಮದ ನಿವಾಸಿಗಳಾದ ರೇವಣಸಿದ್ದಯ್ಯ ಕುಪೇಂದ್ರಯ್ಯ ಮಠ (35), ಸಿದ್ರಾಮಯ್ಯ ಕುಪೇಂದ್ರಯ್ಯ ಮಠ (26) ಮತ್ತು ಬೇಡಿಹಾಳ ಗ್ರಾಮದ ಮಡೆಪ್ಪ ಮಳೇಂದ್ರ ಮಠ (38) ಬಂಧಿತ ಆರೋಪಿಗಳು.

ಜು.11ರಂದು ಕೆ.ಕೆ ನಗರದ ನಿವಾಸಿ ವಿಜಯಲಕ್ಷ್ಮಿ ಮಲ್ಕಯ್ಯಸ್ವಾಮಿ ಅವರನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದರು.

ಪಿಐ ರಮೇಶ ಕಾಂಬಳೆ ನೇತೃತ್ವದ ತನಿಖಾ ತಂಡವು ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ತಲ್ವಾರ್, 2 ಚಾಕು, ಆಟೊ, ಬೈಕ್ ಹಾಗೂ ಮೂರು ಮೊಬೈಲ್ ವಶಕ್ಕೆ ಪಡೆದಿದೆ.

ತನಿಖಾ ತಂಡದಲ್ಲಿ ಪಿಎಸ್‌ಐಗಳಾದ ಕವಿತಾ ಚವ್ಹಾಣ್, ಹುಸೇನ್ ಸಾಬ್, ಸಲಿಮೊದ್ದೀನ್, ಎಎಸ್‌ಐ ಪುಂಡಲೀಕ, ಕಾನ್‌ಸ್ಟೆಬಲ್‌ಗಳಾದ ಮಲ್ಲಿಕಾರ್ಜುನ, ನಾಗೇಂದ್ರ, ಪ್ರಕಾಶ, ಪ್ರಶಾಂತ, ಅನಿಲ್, ಶಿವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.