ಕಲಬುರ್ಗಿ: ‘ಮಾರ್ಚ್ 3ರಂದು ನಮ್ಮ ಮನೆಯಲ್ಲಿಟ್ಟಿದ್ದ ₹ 20 ಲಕ್ಷ ನಗದು, 25 ತೊಲ ಚಿನ್ನವನ್ನು ದರೋಡೆಕೋರರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ದೂರು ನೀಡಲು ಹೋದರೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ’ ಎಂದು ಎಸ್.ಎಸ್. ಟಿ.ವಿ. ಮಾಲೀಕ, ಹಿರಿಯ ಪತ್ರಕರ್ತ ಶಂಕರ ಕೋಡ್ಲಾ ಬೇಸರ ವ್ಯಕ್ತಪಡಿಸಿದರು.
‘ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಮಯ ಸಾಧಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ನಗದು ಹಾಗೂ ಚಿನ್ನವನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ. ಅದೇ ದಿನ ದೂರು ನೀಡಲೆಂದು ಠಾಣೆಗೆ ತೆರಳಿ ಸಂಜೆಯವರೆಗೆ ಕಾಯ್ದರೂ ದೂರು ಸ್ವೀಕರಿಸಿಲ್ಲ. ಈ ಬಗ್ಗೆ ಪೊಲೀಸ್ ಕಮಿಷನರ್ ಅವರ ಗಮನಕ್ಕೆ ತಂದರೆ ಅವರೂ ಸೂಕ್ತವಾಗಿ ಸ್ಪಂದಿಸಿಲ್ಲ’ ಎಂದರು.
‘ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ ₹ 1.5 ಕೋಟಿ ಹಾಗೂ ಬ್ಯಾಂಕ್ನಿಂದ ₹ 1 ಕೋಟಿ ಸಾಲ ಮಾಡಿದ್ದೆ. ಇದೇ 10ರಂದು ಸಾಲದ ಕಂತನ್ನು ಪಾವತಿಸಬೇಕಿತ್ತು. ಅದಕ್ಕಾಗಿ ಹಣವನ್ನು ಮನೆಯಲ್ಲಿಟ್ಟಿದ್ದೆವು. ನನ್ನ ಮಗಳು ಬೀರುವಿನ ಕೀಲಿಯನ್ನು ಅಲ್ಲಿಯೇ ಬಿಟ್ಟು ಹೊರ ಹೋಗಿದ್ದಾಗ ಈ ಘಟನೆ ನಡೆದಿದೆ. ಹಿಂದೆಯೂ ಕುಸನೂರ ರಸ್ತೆಯಲ್ಲಿ ಹಲವು ಕಳ್ಳತನ ಪ್ರಕರಣಗಳು ನಡೆದಿದ್ದು, ಆಗಲೂ ಪೊಲೀಸರು ದೂರು ಸ್ವೀಕರಿಸಿಲ್ಲ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.