ADVERTISEMENT

ಫಸಲ್‌ ಬಿಮಾ ಲಾಭ ರೈತರಿಗೆ ಸಿಗಲಿ: ಸಂಸದ ಭಗವಂತ ಖೂಬಾ

ಬ್ಯಾಂಕ್‌ ಅಧಿಕಾರಿ, ಕೃಷಿ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 3:47 IST
Last Updated 23 ಜೂನ್ 2021, 3:47 IST
ಕಲಬುರ್ಗಿಯಲ್ಲಿ ಮಂಗಳವಾರ ಬೀದರ್‌ ಸಂಸದ ಭಗವಂತ ಖೂಬಾ ಅವರು ಫಸಲ್‌ ಬಿಮಾ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು
ಕಲಬುರ್ಗಿಯಲ್ಲಿ ಮಂಗಳವಾರ ಬೀದರ್‌ ಸಂಸದ ಭಗವಂತ ಖೂಬಾ ಅವರು ಫಸಲ್‌ ಬಿಮಾ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು   

ಕಲಬುರ್ಗಿ: ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಲಾಭ ರೈತರಿಗೆ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಬೀದರ್‌ ಸಂಸದ ಭಗವಂತ ಖೂಬಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಅದರ ಪ್ರಯೋಜನಗಳನ್ನು ತಿಳಿಸಬೇಕು. ಈ ಯೋಜನೆ ಲಾಭ ಪಡೆಯುವಂತಾಗಲು ನೋಂದಣಿಯಾಗದ ರೈತರ ಗುರುತಿಸಿ, ನೋಂದಣಿ ಮಾಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಬೀದರ್‌ ಲೋಕಸಭಾ ವ್ಯಾಪ್ತಿಯ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ತಾಲ್ಲೂಕುಗಳಲ್ಲಿ ಕಳೆದ ವರ್ಷ ಅತಿ ಕಡಿಮೆ ಫಸಲ್ ಬಿಮಾ ಯೋಜನೆಯಲ್ಲಿ ರೈತರ ನೋಂದಣಿ ಮಾಡಲಾಗಿದೆ. ಈ ತಾಲ್ಲೂಕಿನ ವ್ಯವಸ್ಥಾಪಕರು ಹೆಚ್ಚು ಶ್ರಮವಹಿಸಿ ರೈತರ ನೋಂದಣಿ ಮಾಡಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆ ಮತ್ತು ತಾಲ್ಲೂಕಿನ ಎಲ್ಲ ಬ್ಯಾಂಕ್‍ಗಳ ಮುಂದೆ ರೈತರಿಗೆ ಫಸಲ ಬಿಮಾ ಯೋಜನೆ ನೋಂದಣಿ ಮಾಡಲಾಗುವುದು ಎಂಬ ಫಲಕಗಳನ್ನು ಹಾಕಬೇಕು. ಹಳ್ಳಿಗಳಲ್ಲಿ ಯೋಜನೆಯ ಮೇಳ ಆಯೋಜಿಸಬೇಕು, ಪ್ರತಿ ತಾಲ್ಲೂಕಿನಲ್ಲಿ 2 ವಾಹನಗಳ ಮೂಲಕ ಪ್ರಚಾರ ಮಾಡಬೇಕು ಇನ್ನಿತರ ಜಾಗೃತಿ ಕಾರ್ಯಕ್ರಮಗಳ ಮೂಲಕ ಯೋಜನೆಯ ಉದ್ದೇಶ, ಲಾಭವನ್ನು ಜನರಿಗೆ ತಿಳಿಸಬೇಕು’ ಎಂದು ಹೇಳಿದರು.

‘ಪ್ರತಿ ಮನೆ ಬಾಗಿಲಿಗೆ ಕರ ಪತ್ರಗಳನ್ನು ನೀಡುವ ಮೂಲಕ ಮಾಹಿತಿ ನೀಡಿ ಅಧಿಕ ರೈತರು ಈ ಯೋಜನೆಯ ಲಾಭ ಪಡೆಯುವಂತೆ ಬ್ಯಾಂಕ್‍ಗಳ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಪ್ರತಿ ಬ್ಯಾಂಕ್‍ನ ಶಾಖೆಯಲ್ಲಿ ಗ್ರಾಹಕರಾಗಿರುವ ರೈತರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿ ಅವರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವಂತೆ ಸೂಕ್ತ ಮಾಹಿತಿಯನ್ನು ನೀಡಬೇಕು’ ಎಂದರು.

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರು, ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಇಂತೆಸಾರ್ ಹುಸೇನ್, ಡಿಸಿಸಿ ಬ್ಯಾಂಕ್ ಜನರಲ್ ಮ್ಯಾನೇಜರ್ ಮುತ್ತು ರಾಜ ಹಾಗೂ ತಾಲ್ಲೂಕಿನ ವಿವಿಧ ಬ್ಯಾಂಕ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.