
ಪ್ರಜಾವಾಣಿ ವಾರ್ತೆ
ಕಲಬುರಗಿ: ‘ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಬಾಗಲಕೋಟೆಯಲ್ಲಿ ನಡೆದ ಘಟನೆಯ ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಆಚರಣೆ ವೇಳೆ ನಡೆದ ಗಲಾಟೆಗಳಿಗೆ ಕಾಂಗ್ರೆಸ್ನ ರಾಜಕೀಯ ಧೋರಣೆಯೇ ಕಾರಣ. ನೀವು ಬ್ರದರ್ಸ್ ಎಂದು ಹೇಳುತ್ತೀರಿ. ಅದರಿಂದಲೇ ಇಂತಹ ಘಟನೆಗಳು ನಡೆಯುತ್ತವೆ. ನಂತರ ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತದೆ’ ಎಂದು ದೂರಿದರು.
‘ಘಟನೆಗೆ ಸಂಬಂಧಿಸಿದಂತೆ ಹಿಂದೂ–ಮುಸ್ಲಿಂ ಎರಡೂ ಸಮುದಾಯದವರುನ್ನು ಬಂಧಿಸುವ ಬದಲು, ತಪ್ಪು ಮಾಡಿದವರನ್ನು ಮಾತ್ರ ಬಂಧಿಸಬೇಕು. ತಪ್ಪು ಮಾಡದವರನ್ನು ಒಳಗೊಂಡು ಸಾಮೂಹಿಕ ಕ್ರಮ ಕೈಗೊಳ್ಳುವುದು ಸರಿಯಲ್ಲ’ ಎಂದರು.
ರಾಹುಲ್ ಅಪ್ರಬುದ್ಧ ರಾಜಕಾರಣಿ: ಎಐ ಸಮ್ಮೇಳನವನ್ನು ಟೀಕಿಸಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ‘ರಾಹುಲ್ ಗಾಂಧಿ ದಾರಿ ತಪ್ಪಿದ ಮಗ. ಅವರು ಅಪ್ರಬುದ್ಧ ರಾಜಕಾರಣಿ. ಅವರ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.
‘ದೇಶದ ಗೌರವಕ್ಕೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಸ್ವಲ್ಪನಾದರೂ ವಿವೇಕ ಇದ್ದರೆ ದೇಶದ ಕ್ಷಮೆ ಕೇಳಬೇಕು’ ಎಂದು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.