ADVERTISEMENT

ಪ್ರಿಯಾಂಕ್ ಖರ್ಗೆ ಇನ್ನೂ ಬಚ್ಚಾ: ಈಶ್ವರಪ್ಪ

ಆರ್‌ಎಸ್‌ಎಸ್‌ ನಿಷೇಧಿಸುವ ಹೇಳಿಕೆಗೆ ಈಶ್ವರಪ್ಪ ತಿರುಗೇಟು

​ಪ್ರಜಾವಾಣಿ ವಾರ್ತೆ
Published 30 ಮೇ 2023, 5:46 IST
Last Updated 30 ಮೇ 2023, 5:46 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಕಲಬುರಗಿ: ‘ಆರ್‌ಎಸ್‌ಎಸ್‌ ದೇಶಭಕ್ತರ ಸಂಘಟನೆಯಾಗಿದ್ದು, ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಆದರೂ, ಆರ್‌ಎಸ್‌ಎಸ್‌ ನಿಷೇಧಿಸುವುದಾಗಿ ಹೇಳುತ್ತಿರುವ ಪ್ರಿಯಾಂಕ್ ಖರ್ಗೆ ಇನ್ನೂ ಬಚ್ಚಾ. ಅವನೇನು ಮಾಡಲು ಸಾಧ್ಯ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ನಿಷೇಧ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರ ಸ್ಪಷ್ಟನೆಯ ಬಳಿಕವೂ ಪ್ರಿಯಾಂಕ್ ಪದೇ ಪದೇ ನಿಷೇಧದ ಮಾತನ್ನಾಡುತ್ತಿರುವುದು ಸರಿಯಲ್ಲ’ ಎಂದು ಹರಿಹಾಯ್ದರು.

‘ಆರ್‌ಎಸ್‌ಎಸ್‌ ದೇಶದ್ರೋಹಿಗಳಿಗೆ ಸಿಂಹ ಸ್ವಪ್ನವಾಗಿದೆ. ಹಾಗಾಗಿಯೇ ದೇಶದಾದ್ಯಂತ ಕೋಟ್ಯಂತರ ಕಾರ್ಯಕರ್ತರನ್ನು ಹೊಂದಿದೆ. ನಿಷೇಧಿಸುತ್ತೇವೆ ಎಂದು ಹೇಳುವ ಮೂಲಕ ಪ್ರಿಯಾಂಕ್ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದರು.

ADVERTISEMENT

‘ಪ್ರಿಯಾಂಕ್ ಅವರ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ಮಾದರಿಯಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸ್ಥಾನದಲ್ಲಿದ್ದು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರೇ ಇಂತಹ ಮಾತನಾಡಿಲ್ಲ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರೂ ಹೇಳಿದ ನಂತರವೂ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದರು. ಅಲ್ಲದೆ ಪ್ರಿಯಾಂಕ್ ಖರ್ಗೆ ಅವರ ತಂದೆಯವರ ಸಲಹೆ ಮಾರ್ಗದರ್ಶನ ಪಡೆದುಕೊಂಡು ಸಚಿವ ಸ್ಥಾನ ನಿರ್ವಹಿಸಲಿ, ರಾಜಕಾರಣದಲ್ಲಿ ಮುನ್ನಡೆಯಲಿ ಎಂದು ಸಲಹೆ ನೀಡಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ ಐದೂ ಗ್ಯಾರಂಟಿಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಇದೀಗ ಎರಡು ಕ್ಯಾಬಿನೆಟ್ ಸಭೆಗಳಾದರೂ ಗ್ಯಾರಂಟಿಗಳಿಗೆ ಅನುಮೋದನೆ ಸಿಕ್ಕಿಲ್ಲ. ನಾವು ಸುಖಾಸುಮ್ಮನೆ ಎಲ್ಲವನ್ನೂ ಟೀಕಿಸುವುದಿಲ್ಲ. ಒಂದು ತಿಂಗಳು ಕಾಯ್ದು ನೋಡುತ್ತೇವೆ. ಆಗಲೂ ಜಾರಿಯಾಗದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಉಪಾಧ್ಯಕ್ಷ ಶರಣಪ್ಪ ತಳವಾರ, ಮುಖಂಡರಾದ ಧರ್ಮಣ್ಣ ಇಟಗಾ, ಶಂಕರ ಚವ್ಹಾಣ ಮೊದಲಾದವರಿದ್ದರು.

ದತ್ತನ ದರ್ಶನ ಪಡೆದ ಈಶ್ವರಪ್ಪ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೋಮವಾರ ಸಂಜೆ ದೇವಲಗಾಣಗಾಪುರಕ್ಕೆ ತೆರಳಿ ದತ್ತಾತ್ರೇಯನ ನಿರ್ಗುಣ ಪಾದುಕೆ ದರ್ಶನ ಪಡೆದುಕೊಂಡರು.

ನಿರುದ್ಯೋಗಿ ಪದವೀಧರರಿಗೆ ಕಾಂಗ್ರೆಸ್ ದ್ರೋಹ

ಚುನಾವಣೆ ಸಂದರ್ಭದಲ್ಲಿ ರಾಜ್ಯದ ಎಲ್ಲ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುತ್ತೇನೆ ಎಂದಿದ್ದ ಕಾಂಗ್ರೆಸ್ ಈಗ ಈ ಬಾರಿ ಪಾಸಾದವರಿಗೆ ಮಾತ್ರ ಕೊಡುತ್ತೇನೆ ಎನ್ನುವ ಮೂಲಕ ದ್ರೋಹ ಬಗೆದಿದೆ ಎಂದು ಈಶ್ವರಪ್ಪ ಹರಿಹಾಯ್ದರು. ನೀಡಿದ ಗ್ಯಾರಂಟಿಗಳನ್ನು ನಂಬಿಕೊಂಡೇ ಜನರು ಕಾಂಗ್ರೆಸ್‌ಗೆ ಈ ಸಲ ಮತ ನೀಡಿ ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು. ಎಲ್ಲರಿಗೂ ಉಚಿತ ಎಂದು ಭಾಷಣ ಬಿಗಿದು ಈಗ ಷರತ್ತುಗಳನ್ನು ಹಾಕವುದು ಸರಿಯಲ್ಲ. 200 ಯೂನಿಟ್ ವಿದ್ಯುತ್ತನ್ನು ಬಿಪಿಎಲ್ ಕಾರ್ಡ್ ಇದ್ದವರಿಗೆ ಅನ್ವಯ ಅನ್ನುತ್ತಿರುವುದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು. ನೀಡಿದ ಗ್ಯಾರಂಟಿಗಳನ್ನು ಈಡೇರಿಸದಿದ್ದರೆ ಸಿದ್ದರಾಮಯ್ಯ 14 ಬಾರಿ ಬಜೆಟ್ ಮಂಡಿಸಿ ಏನುಪಯೋಗ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.