ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ವೃಂದ ಹುದ್ದೆಗಳು ಹಾಗೂ ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಮಾಡದಂತೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಖಂಡನಾರ್ಹ. ಕೂಡಲೇ ಸುತ್ತೋಲೆ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಶಾಸಕ ಪ್ರಿಯಾಮಕ್ ಖರ್ಗೆ ಖರ್ಗೆ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿದ್ದಾರೆ.
‘ಈ ಭಾಗದ ನಾಯಕರ ಹೋರಾಟದ ಫಲವಾಗಿ ಸಂವಿಧಾನದ ಆರ್ಟಿಕಲ್–371ಜೆ ತಿದ್ದುಪಡಿ ತರಲಾಯಿತು. 2014ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ನಗರದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ, ಈ ಭಾಗದ ಹುದ್ದೆಗಳ ಭರ್ತಿಗೆ ಇರುವ ಆರ್ಥಿಕ ಇಲಾಖೆಯ ನಿಬಂಧನೆಗಳಿಗೆ ವಿನಾಯತಿ ನೀಡಿತು. ಸುಮಾರ 50 ಸಾವಿರ ಹುದ್ದೆಗಳ ಭರ್ತಿಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈಗ ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ನೆಪವೊಡ್ಡಿ ಹುದ್ದೆಗಳ ನೇರ ನೇಮಕಾತಿಗೆ ಮಾತ್ರ ತಡೆಯೊಡ್ಡಿರುವುದು ‘371ಜೆ’ ಮೂಲ ಉದ್ದೇಶಕ್ಕೆ ಧಕ್ಕೆ ತಂದಂತಾಗಿದೆ’ ಎಂದೂ ಶಾಸಕರು ದೂರಿದ್ದಾರೆ.
‘ಕೋವಿಡ್ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಈ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸದೆ, ಹುದ್ದೆಗಳ ನೇಮಕಾತಿಗೂ ತಡೆ ಹಾಕಲು ಅಧಿಸೂಚನೆ ಹೊರಡಿಸುವ ಮೂಲಕ ಸರ್ಕಾರ ಅನ್ಯಾಯ ಎಸಗಿದಂತಾಗಿದೆ. ಕೇವಲ ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿ ಅಗದು’ ಎಂದೂ ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.