ADVERTISEMENT

ಕಾರ್‌ ಅಪಘಾತ; ಡಾ.ಬಸವರಾಜ ಅಮರಾಪುರ ಸಾವು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 3:03 IST
Last Updated 5 ಡಿಸೆಂಬರ್ 2020, 3:03 IST
ಡಾ.ಬಸವರಾಜ ಅಮರಾಪುರ
ಡಾ.ಬಸವರಾಜ ಅಮರಾಪುರ   

ಕಲಬುರ್ಗಿ: ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಅಮರಾಪುರ (59) ಅವರು, ಸಮೀಪದ ಅವರಾದ ಬಿ. ಗ್ರಾಮದ ಬಳಿ ಶುಕ್ರವಾರ ನಸುಕಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಪತ್ನಿ ಹಾಗೂ ಪುತ್ರಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಬಸವರಾಜ ಅಮರಾಪುರ ಅವರು ಚಿಕಿತ್ಸೆಗಾಗಿ ಶುಕ್ರವಾರ ನಸುಕಿನಲ್ಲಿ ಪತ್ನಿ ಹಾಗೂ ಪುತ್ರಿ ಸಮೇತ ಹೈದರಾಬಾದ್‌ಗೆ ತೆರಳುತ್ತಿದ್ದರು. ಚಾಲಕ ಕಾರ್‌ ಓಡಿಸುತ್ತಿದ್ದ. ನಗರದಿಂದ ಕೆಲವೇ ನಿಮಿಷ ದೂರ ಹೋದ ಮೇಲೆ ಹುಮನಾಬಾದ್‌ ರಸ್ತೆಯಲ್ಲಿ ಕಾರ್‌ ಚಾಲಕ ಲಾರಿಯನ್ನು ಹಿಂದಿಕ್ಕಲು ಹೋದ. ಆ ಕ್ಷಣಕ್ಕೆ ಎದುರಿನಿಂದ ಇನ್ನೊಂದು ಕಾರ್‌ ಬರುತ್ತಿತ್ತು. ನಸುಕಿನಲ್ಲಿ ಮಂಜು ಕವಿದ ಕಾರಣ ಎದುರಿನ ಕಾರ್‌ ಹತ್ತಿರ ಬರುವವರೆಗೂ ಗೊತ್ತಾಗಲಿಲ್ಲ. ಕಾರ್‌ ಅಪಘಾತವಾಗುತ್ತದೆ ಎಂದು ತಿಳಿದಕ್ಷಣ ಚಾಲಕ ‘ಯು ಟರ್ನ್‌’ ಮಾಡಿದರು. ಇದರಿಂದ ಎದುರಿಗೆ ಬರುತ್ತಿದ್ದ ಕಾರ್‌ ನೇರವಾಗಿ ಹಿಂದಿನ ಸೀಟ್‌ನಲ್ಲಿದ್ದವರಿಗೆ ಗುದ್ದಿತು. ಆದರೆ, ಅಮರಾಪುರ ಅವರ ಕಾರ್‌ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಿಂದ ಪರಾರಿಯಾದ’ ಎಂದು ಪೊಲೀಸ್‌ ಮೂಲಗಳುತಿಳಿಸಿವೆ.

ಬಸವರಾಜ ಅಮರಾಪುರ ಅವರ ತಲೆ, ಸೊಂಟಕ್ಕೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲೇ ಕೊನೆಯುಸಿರೆ ಳೆದರು. ಅವರ ಪಕ್ಕದಲ್ಲಿ ಕುಳಿತಿದ್ದ ಪತ್ನಿ ರಾಜೇಶ್ವರಿ ಅವರಿಗೆ ಬೆನ್ನುಮೂಳೆ ಮುರಿದಿದೆ. ಹಿರಿಯ ಪುತ್ರಿ ವೈದ್ಯರಾದ ಡಾ.ಮೇಘಾ ಅವರ ತಲೆಗೆ ತೀವ್ರ ಪೆಟ್ಟುಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಸಾಗಿಸಲಾಗಿದೆ.

ADVERTISEMENT

ಅವರ ಸ್ವಂತ ಊರಾದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಮರಾವತಿಯಲ್ಲಿ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಘಟನಾ ಸ್ಥಳಕ್ಕೆ ಇನ್‍ಸ್ಪೆಕ್ಟರ್ ಶಾಂತಿನಾಥ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಕಲಬುರ್ಗಿ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.