ADVERTISEMENT

ಅಂಗವಿಲರಿಗೆ ಪ್ರತ್ಯೇಕ ವಿ.ವಿ ಬೇಡ: ಪ್ರೊ.ಕುಷ್ಟಗಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 14:31 IST
Last Updated 20 ಜೂನ್ 2020, 14:31 IST
ಪ್ರೊ.ವಸಂತ ಕುಷ್ಟಗಿ
ಪ್ರೊ.ವಸಂತ ಕುಷ್ಟಗಿ   

ಕಲಬುರ್ಗಿ: ‘ಅಂಗವಿಕಲ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರು ಮಾಡಿದ ಶಿಫಾರಸು ಸೂಕ್ತವಾದುದಲ್ಲ. ಇದರಿಂದ ಅಂಗವಿಕಲರನ್ನು ಮತ್ತಷ್ಟು ಕುಗ್ಗಿಸಿದಂತಾಗುತ್ತದೆ’ ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಅಭಿಪ್ರಾಯ ಪಟ್ಟಿದ್ದಾರೆ.

‘ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರರೂ ಆಗಿರುವ ದೊರೆಸ್ವಾಮಿ ಅವರು, ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ನೀಡಿದ ಸಲಹೆಗಳು ಸೂಕ್ತವಾಗಿವೆ. ಆದರೆ, ಅಂಗವಿಕಲರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ವಿಚಾರವನ್ನು ಮರು ಪರಿಶೀಲಿಸಬೇಕು. ಅವರೂ ಸಾಮಾನ್ಯ ವಿದ್ಯಾರ್ಥಿಗಳ ಜತೆಗೆ ಬೆರೆತು ಕಲಿಯಬೇಕು. ಆಗ ಮಾತ್ರ ಸಾಮರ್ಥ್ಯವನ್ನು ವರೆಗೆ ಹಚ್ಚಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಅಂಗವಿಲಕರನ್ನು ಮುಖ್ಯವಾಹಿನಿಯಿಂದಲೇ ದೂರ ತಳ್ಳಿದಂತಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ನಾನು ಖುದ್ದು ಅಂಗವಿಕಲನಾದ್ದರಿಂದ ಪ್ರತ್ಯೇಕವಾಗಿ ಕಲಿಯಲು ಆಗುವ ಮಾನಸಿಕ ಘಾತವನ್ನು ಊಹಿಸಬಲ್ಲೆ. ಅಂಗ ಊಣ ಇದ್ದವರ ಕಲ್ಯಾಣಕ್ಕಾಗಿ ವಿಶ್ವವಿದ್ಯಾಲಯಗಳಲ್ಲೇ ಪ್ರತ್ಯೇಕ ವಿಭಾಗ ತೆರೆಯುವುದು ಸೂಕ್ತ. ಅದಕ್ಕಿಂತ ಮುಖ್ಯವಾಗಿ, ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ತಲಾ ಒಂದು ಸ್ಥಾನವನ್ನು ಅಂಗವಿಕಲರಿಗಾಗೇ ಮೀಸಲಿಡಬೇಕು. ಇದರಿಂದ ಸರ್ಕಾರಕ್ಕೆ ನಮ್ಮ ಬದುಕು, ಬವಣೆ, ಬೇಡಿಕೆಗಳ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ’ ಎಂದೂ ಅವರು ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.