ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಶಾಸಕಿ ಖನೀಜ್‌ ಫಾತಿಮಾ ಅವರ ಮನೆ ಮುಂದೆ ದರಣಿ ನಡೆಸಿದ ಮಾದಿಗ ಸಮಾಜದ ಮುಖಂಡರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 3:46 IST
Last Updated 4 ಆಗಸ್ಟ್ 2021, 3:46 IST
ರಾಜ್ಯ ಮಾದಿಗ ಸಮಾಜದ ಜಿಲ್ಲಾ ಘಟಕದ ಮುಖಂಡರು ಕಲಬುರ್ಗಿಯಲ್ಲಿ ಮಂಗಳವಾರ ಶಾಸಕಿ ಖನೀಜ್‌ ಫಾತಿಮಾ ಅವರ ಮನೆ ಮುಂದೆ ಧರಣಿ ನಡೆಸಿದರು
ರಾಜ್ಯ ಮಾದಿಗ ಸಮಾಜದ ಜಿಲ್ಲಾ ಘಟಕದ ಮುಖಂಡರು ಕಲಬುರ್ಗಿಯಲ್ಲಿ ಮಂಗಳವಾರ ಶಾಸಕಿ ಖನೀಜ್‌ ಫಾತಿಮಾ ಅವರ ಮನೆ ಮುಂದೆ ಧರಣಿ ನಡೆಸಿದರು   

ಕಲಬುರ್ಗಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಮುಂಬರುವ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಮಾದಿಗ ಸಮಾಜದ ಜಿಲ್ಲಾ ಘಟಕದಿಂದ ಶಾಸಕಿ ಖನೀಜ್‌ ಫಾತಿಮಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು, ಶಾಸಕಿ ಖನೀಜ್‌ ಆತಿಮಾ ಅವರ ಮನೆ ಮುಂದೆ ಕೆಲಕಾಲ ಧರಣಿ ನಡೆಸಿದರು.

ಕಲಬುರ್ಗಿ ಉತ್ತರ ಮತಕ್ಷೇತ್ರದಲ್ಲಿ ಹಲವರು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಮಂಜೂರಾಗಿಲ್ಲ. ಈ ಆಯ್ಕೆ ಸಮಿತಿಯ ಅಧ್ಯಕ್ಷರಾದ ಖನೀಜ್‌ ಫಾತಿಮಾ ಅವರೇ ಮುತುವರ್ಜಿ ವಹಿಸಿ ಸಾಲ ಮಂಜೂರು ಮಾಡಿಸಬೇಕು. ಕ್ಷೇತ್ರದಲ್ಲಿ ಡಾ.ಬಾಬು ಜಗಜೀವನರಾಮ್‌ ಸಮುದಾಯ ಭವನ, ಮಾದಿಗರ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ, ಒಳಚರಂಡಿ ನಿರ್ಮಾಣ, ಕುರಿಯುವ ನೀರಿಗಾಗಿ ಪ್ರತ್ಯೇಕ ಬೋರ್‌ವೆಲ್‌ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದೂ ಕೋರಿದರು.

ADVERTISEMENT

ಲಿಡ್ಕರ್‌ ಯೋಜನೆ, ಯಶಸ್ವಿನಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ ತುಂಬ ವಿಳಂಬವಾಗಿದೆ. ಇದಕ್ಕೆ ವೇಗ ನೀಡಬೇಕು ಎಂದೂ ಪ್ರತಿಭಟನಾಕಾರರು ಕೋರಿದರು.‌

ಸಂಘಟನೆಯ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ. ನಾಟೀಕಾರ, ಉಪಾಧ್ಯಕ್ಷರಾದ ರಮೇಶ ಕಟ್ಟಿಮನಿ, ರೇವಣಸಿದ್ಧಪ್ಪ ಹೊನ್ನಗುಂಟಿಕರ, ಆನಂದ ತೆಗನೂರ, ಜೈರಾಜ್‌ ಕಿಣಗೀಕರ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.