ಕಲಬುರ್ಗಿ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಸಾಯುವುದಕ್ಕೂ ಮುನ್ನ ಆಕೆಯ ಮೇಲೆ ನಡೆದ ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಎಐಎಂಎಸ್ಎಸ್, ಎಐಡಿವೈಓ, ಎಐಡಿಎಸ್ಓ: ಹತ್ರಾಸ್ನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್), ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಓ) ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ)ಗಳ ಕಾರ್ಯಕರ್ತರು, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ವಿಫಲರಾಗಿದ್ದಾರೆ. ಹೀಗಾಗಿ, ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕು. ಅತ್ಯಾಚಾರ ಮಾಡಿ ಕೊಲೆಗೈದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಗಳ ಮುಖಂಡರಾದ ಮಹೇಶ ಎಸ್.ಬಿ, ಮಹೇಶ ನಾಡಗೌಡ, ಹಣಮಂತ ಎಸ್.ಎಚ್, ಅಶ್ವಿನಿ, ಈರಣ್ಣ ಇಸಬಾ, ಸ್ನೇಹಾ ಕಟ್ಟೀಮನಿ, ಭೀಮಾಶಂಕರ ಪಾಣೆಗಾಂವ ಇದ್ದರು.
ನವೆ ಸವೆರ: ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ನಡೆದ ಅತ್ಯಾಚಾರ ಘಟನೆಗಳನ್ನು ಖಂಡಿಸಿ ನಯೆ ಸವೆರ ಸಂಘಟನೆ ಕಾರ್ಯಕರ್ಯರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಅತ್ಯಾಚಾರಿಗಳು ಯಾವುದೇ ಧರ್ಮದವರಾಗಲಿ ಯಾವುದೇ ಪಕ್ಷದವರಾಗಿರಲಿ ಹಿಂದೆ ಮುಂದೆ ನೋಡದೆ ಗಲ್ಲಿಗೇರಿಸಬೇಕು. ಭಾರತ ದೇಶದಲ್ಲಿ ಬಹಳಷ್ಟು ಕಡೆ ಯುವತಿಯರು, ಸಣ್ಣ ಮಕ್ಕಳೇ ದುಷ್ಕರ್ಮಿಗಳಿಗೆ ಸಂತ್ರಸ್ತರಾಗುತ್ತಿದ್ದು, ಇದಕ್ಕೆ ಕೊನೆಗಾಣಿಸಬೇಕೆಂದರೆ ಇಂತಹ ವ್ಯಕ್ತಿಗಳನ್ನು ಗಲ್ಲಿಗೇರಿಸಬೇಕು. ಇಂತಹ ಸಂದರ್ಭದಲ್ಲಿ ಒಂದು ಹೊಸ ಕಾನೂನು ರಚನೆ ಮಾಡಿ ಇಂಥ ಹೀನ ಕೃತ್ಯವನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘಟನೆ ಅಧ್ಯಕ್ಷ ಮೋದಿನ ಪಟೇಲ್ ಅಣಬಿ, ಶರಣಗೌಡ ಅಲ್ಲಂಪ್ರಭು ಪಾಟೀಲ್, ಸಲೀಂ ಅಹ್ಮದ್ ಚಿತ್ತಾಪುರ, ಶೇಕ್ ಯೂನುಸ್ ಅಲಿ, ನುಹಃ ಮೌಲಾನಾ ಅಫ್ಜಲ್, ಮೆಹಮೂದ್ ಸೈಯದ್, ಏಜಾಜ್ ಅಲಿ ಇನಾಮದಾರ, ಹೈದರ್ ಅಲಿ ಇನಾಮದಾರ, ಡಾ. ರಫೀಕ್ ಕಮಲಾಪುರ, ಸಲೀಂ ಸಗರಿ, ಮೊಹಮ್ಮದ್ ಖಾಲಿಕ, ಸಾಯಿರಾ ಬಾನು, ಅಬ್ದುಲ್ ವಾಹಿದ್, ಅಹ್ಮದಿ ಬೇಗಂ, ಗೀತಾ ಮುದುಗಲ್ ರಾಬಿಯಾ ಶಿಕಾರಿ, ರಾಫಿಯಾ ಶಿರಿನ್, ಫೌಜಿಯಾ ಬೇಗಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.