ಚಿಂಚೋಳಿ: ಚಿಂಚೋಳಿ ಮತ್ತು ಕುಂಚಾವರಂ ಠಾಣೆಯ ಎಸ್ಐಗಳು ಅಮಾಯಕರ ಮೇಲೆ ದೌರ್ಜನ್ಯ ಎಸಗುತ್ತ ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಬಸ್ ಡಿಪೋ ಕ್ರಾಸ್ ತೆರಳಿ ಅಲ್ಲಿಂದ ಪೊಲೀಸ್ ಠಾಣೆಗೆ ಬಂದು ಠಾಣೆಯ ಆವರಣದ ಹೊರಗಡೆ ನಡು ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿದರು.
ತಾಲ್ಲೂಕಿನಲ್ಲಿ ಅಮಾಯಕರ ಮೇಲಿನ ರೌಡಿಶೀಟರ್ ಪ್ರಕರಣಗಳನ್ನು ಕೈಬಿಡಬೇಕು, ಸೇಡಂ ತಾಲ್ಲೂಕು ಕೋಡ್ಲಾ ಮತ್ತು ಚಿಂಚೋಳಿ ತಾಲ್ಲೂಕು ಕುಪನೂರ ಗ್ರಾಮದಮಾಯಕರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಚಿಂಚೋಳಿ ಮತ್ತು ಕುಂಚಾವರಂ ಠಾಣೆಯ ಸಬ್ ಇನ್ಸ್ಪೆಕ್ಟರ್ಗಳನ್ನು ಅಮಾನತುಗೊಳಿಸಬೇಕು, ತಾಲ್ಲೂಕಿನಲ್ಲಿ ದಲಿತ ದೌರ್ಜನ್ಯ ಕಾಯ್ದೆ ಸಮರ್ಪಕ ಜಾರಿ ಮಾಡಬೇಕು, ಮೊಗದಂಪುರ ಜನರ ಮೇಲೆ ಹಾಕಿದ ಸುಳ್ಳು ಕೇಸ್ ವಾಪಸ್ ಪಡೆಯುವುದು, ಚಂದಾಪುರ ನಿವಾಸಿ ರಾಜಕುಮಾರ ದೂರು ಸ್ವೀಕರಿಸಿ ಕಾನೂನು ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ಡಿವೈಎಸ್ಪಿ ಈ.ಎಸ್. ವೀರಭದ್ರಯ್ಯ ಅವರಿಗೆ ಸಲ್ಲಿಸಿದರು.
ಗೌತಮ ಬೊಮ್ಮನಳ್ಳಿ, ಮಾರುತಿ ಗಂಜಗಿರಿ, ಆನಂದ ಟೈಗರ್, ಆರ್. ಗಣಪತರಾವ್, ಗೋಪಾಲ ರಾಂಪುರೆ, ವಕೀಲ ಮಾಣಿಕರಾವ್ ಗುಲಗುಂಜಿ, ಕಾಶಿನಾಥ ಸಿಂಧೆ, ಅಬ್ದುಲ್ ಬಾಷೀತ್, ಶುಷ್ಮಾರೆಡ್ಡಿ, ವಿಜಯಕುಮಾರ ಗಂಗನಪಳ್ಳಿ, ಅನ್ವರ್ ಖತೀಬ್, ರಘುವೀರ ಭೀಮಸೈನಿಕ್, ವಿಲಾಸ ಗೌತಮ ಮಾತನಾಡಿದರು.
ಪ್ರತ್ಯೇಕ ಚರ್ಚೆ ಭರವಸೆ: ಬೇಡಿಕೆಗಳ ಪತ್ರವನ್ನು ಮೇಲಧಿಕಾರಿಗಳಿಗೆ ಕಳುಹಿಸಿಕೊಡುವೆ, ಪ್ರಮುಖರನ್ನು ಪ್ರತ್ಯೇಕವಾಗಿ ಕರೆಸಿ ನೋವು ಆಲಿಸುತ್ತೇನೆ, ಮೇಲಧಿಕಾರಿಗಳು ವಿಚಾರಣಾಧಿಕಾರಿಯನ್ನು ನೇಮಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಡಿವೈಎಸ್ಪಿ ಈ.ಎಸ್. ವೀರಭದ್ರಯ್ಯ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟು ಮನೆಗೆ ಮರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.