ADVERTISEMENT

ಆಳಂದ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ

ಕಡಗಂಚಿ ಘಟನೆ: ಡಿವೈಎಸ್‌ಪಿ ವಿರುದ್ದ ಕ್ರಮಕ್ಕೆ ಕಾಂಗ್ರೆಸ್ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 3:12 IST
Last Updated 23 ಡಿಸೆಂಬರ್ 2020, 3:12 IST
ಆಳಂದ ಪೊಲೀಸ್‌ ಠಾಣೆ ಮುಂದೆ ಡಿವೈಎಸ್‌ಪಿ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಆಳಂದ ಪೊಲೀಸ್‌ ಠಾಣೆ ಮುಂದೆ ಡಿವೈಎಸ್‌ಪಿ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಅವರು ಮನೆಗೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್‌ ಮಾಡಿದ್ದಾರೆ ಎಂದು ಆಪಾದಿಸಿ ಆಳಂದ ಪೊಲೀಸ್‌ ಠಾಣೆಗೆ ಮಂಗಳವಾರ ಸಂಜೆ ಮಾಜಿ ಶಾಸಕ ಬಿ.ಆರ್.ಪಾಟೀಲ ನೇತೃತ್ವದಲ್ಲಿ ಕಾರ್ಯಕರ್ತರು ಘೇರಾವ್ ಹಾಕಿದರು.

ಸೋಮವಾರ ಅಹೋರಾತ್ರಿಯೂ 1 ಗಂಟೆಗೆ ಮಾಜಿ ಶಾಸಕ ಬಿ.ಆರ್.ಪಾಟೀಲ ನೇತೃತ್ವದಲ್ಲಿ ಇದೇ ಘಟನೆಗೆ ಸಂಬಂಧಿಸಿ ಪ್ರತಿಭಟನೆ ಜರುಗಿತು. ಮತದಾನ ಇರುವ ಕಾರಣ ಡಿವೈಎಸ್‌ಪಿ ಕ್ರಮ ಖಂಡಿಸಿ ಪ್ರತಿಭಟನೆ ಮುಂದೂಡಲಾಗಿತ್ತು.

ಮತದಾನ ಮುಕ್ತಾಯದ ನಂತರ ಮಾಜಿ ಶಾಸಕ ಬಿ.ಆರ್.ಪಾಟೀಲ ನೇತೃತ್ವದಲ್ಲಿ ಪೊಲೀಸ್‌ ಠಾಣೆವರೆಗೆ ನೂರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಿದರು. ಡಿವೈಎಸ್‌ಪಿ ಕ್ರಮ ಖಂಡಿಸಿ ಧಿಕ್ಕಾರ ಕೂಗಲಾಯಿತು. ಅಲ್ಲದೆ ಡಿವೈಎಸ್‌ಪಿ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಯಿತು.

ADVERTISEMENT

ಮಾಜಿ ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ಕಡಗಂಚಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಡಿವೈಎಸ್‌ಪಿ ಲಾಠಿ ಚಾರ್ಜ್‌ ಮಾಡಿ ಗೂಂಡಾಗಿರಿ ಮಾಡಿದ್ದಾರೆ. ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿರುವ ಡಿವೈಎಸ್ಪಿ ಮತ್ತು ಪಿಎಸ್‌ಐ ವಿರುದ್ದ ಪೊಲೀಸ್‌ ಮಹಾನಿರ್ದೇಶಕರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಳಂದ ತಾಲ್ಲೂಕಿನಲ್ಲಿ 1140 ಅಕ್ರಮ ಸರಾಯಿ ಅಂಗಡಿಗಳಿವೆ. ಮಟಕಾ , ಮರಳು ದಂಧೆ ನಡೆದರೂ ಪೊಲೀಸ್‌ರು ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಕಳವು ಮತ್ತಿತರ ಪ್ರಕರಣಗಳು ಮುಚ್ಚಿ ಹಾಕಿ ಹಣ ವಸೂಲಿಗೆ ಪೊಲೀಸ್‌ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡ ಸಲಾಂ ಸಗರಿ ,ಗುರುಶರಣ ಪಾಟೀಲ, ಶರಣಬಸಪ್ಪ ಭೂಸನೂರು, ಅಶೋಕ ಸಾವಳೇಶ್ವರ ಮಾತನಾಡಿ, ‘ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಅವರು ಶಾಸಕರ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅಮಾಯಕ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್‌ ಮಾಡಿರುವ ಕ್ರಮ ಖಂಡನೀಯ’ ಎಂದು ಆಪಾದಿಸಿದರು.

ಮುಖಂಡರಾದ ಶಂಕರರಾವ ದೇಶಮುಖ, ಅನೀಲ ರಾಜೋಳೆ, ಭೀಮರಾವ ಡಗೆ, ದಿಲೀಪ ಕ್ಷೀರಸಾಗರ, ಸತೀಶ ಬನಪಟ್ಟಿ, ರವೀಂದ್ರ ಕೊರಳ್ಳಿ, ಶರಣಬಸಪ್ಪ ವಾಗೆ, ಮಲ್ಲಪ್ಪ ಹತ್ತರಕಿ, ಶಿವಾಜಿ ರಾಠೋಡ, ರಾಜಶೇಖರ ಪಾಟೀಲ, ಫಿರ್ದೋಶಿ ಅನ್ಸಾರಿ ಹಾಗೂ ಕಡಗಂಚಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಕಡಗಂಚಿ ಘಟನೆ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿದರು.

ಪೊಲೀಸ್ ಅಧಿಕಾರಿ ಜೇಮ್ಸ್, ಸಿಪಿಐ ಮಂಜುನಾಥ, ಪಿಎಸ್ಐಗಳಾದ ಮಹಾಂತೇಶ ಪಾಟೀಲ, ಸುವರ್ಣಾ ಮಲಶೆಟ್ಟಿ, ಇಂದುಮತಿ, ಉದ್ದಂಡಪ್ಪ, ರಾಜಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.