ADVERTISEMENT

ಕಲಬುರಗಿ | ಸಿಯುಕೆ ಕೋಮುವಾದೀಕರಣ: ಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:56 IST
Last Updated 26 ಜನವರಿ 2023, 5:56 IST
ಕಲಬುರಗಿ ನಗರದ ಸಂಸದ ಡಾ.ಉಮೇಶ ಜಾಧವ ನಿವಾಸದ ಮುಂಭಾಗ ವಿಶ್ವವಿದ್ಯಾಲಯಗಳ ರಕ್ಷಣಾ ಹೋರಾಟ ಸಮಿತಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು
ಕಲಬುರಗಿ ನಗರದ ಸಂಸದ ಡಾ.ಉಮೇಶ ಜಾಧವ ನಿವಾಸದ ಮುಂಭಾಗ ವಿಶ್ವವಿದ್ಯಾಲಯಗಳ ರಕ್ಷಣಾ ಹೋರಾಟ ಸಮಿತಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು   

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕೋಮುವಾದೀಕರಣ ಹಾಗೂ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ವಿಶ್ವವಿದ್ಯಾಲಯಗಳ ರಕ್ಷಣಾ ಹೋರಾಟ ಸಮಿತಿ ಸದಸ್ಯರು ಸಂಸದ ಡಾ.ಉಮೇಶ ಜಾಧವ ನಿವಾಸದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

‘ವಿಶ್ವವಿದ್ಯಾಲಯದಲ್ಲಿ ಕೋಮು ವಾದಿ ಚಟುವಟಿಕೆ ನಡೆಯುತ್ತಿದೆ. ಎಸ್‌ಸಿ, ಎಸ್‌ಟಿ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿ ದೌರ್ಜನ್ಯ ನಡೆಸಲಾಗುತ್ತಿದೆ. ಸಂಸದ ಉಮೇಶ ಜಾಧವ ಮೌನವಹಿಸಿದ್ದು ಖಂಡನೀಯ. ಸಂಸದರು ಮಧ್ಯಪ್ರವೇಶಿಸಿ ವಿಶ್ವವಿದ್ಯಾಲಯದಲ್ಲಿ ಕೋಮುವಾದಿ ಚಟುವಟಿಕೆಗೆ ಕಡಿವಾಣ ಹಾಕಬೇಕು’ ಎಂದು ಪ್ರತಿಭಟನಾನಿರತರು ಒತ್ತಾಯಿ ಸಿದರು.

ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ ಮಾತನಾಡಿ, ‘ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ‌ ಹುದ್ದೆಗಳು ಯಾವುದೇ ಒಂದು ಅಜೆಂಡಾ ಜಾರಿಗಾಗಿ ಇರುವ ಹುದ್ದೆಗಳಲ್ಲ. ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರೇ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಪೊಲೀಸರು ಕ್ಯಾಂಪಸ್ ಒಳಗೆ ಬರಲು ಬಿಡಬಾರದು‌. ಆದರೆ, ಕುಲಸಚಿವರೇ ಪೊಲೀಸರನ್ನು ಕರೆಯಿಸಿ ವಿದ್ಯಾರ್ಥಿಗಳ ಮೇಲೆ ಭಯ ಉಂಟು ಮಾಡುತ್ತಿರುವುದು ವಿಪರ್ಯಾಸ’ ಎಂದರು. ವಿವಿಧ ಸಂಘಟನೆಗಳ ಮುಖಂಡರಾದ ಕೆ.ನೀಲಾ, ಅಶ್ವಿನಿ ಮದನಕರ್, ಮರೆಪ್ಪ ಹಳ್ಳಿ, ಅನಿಲ್ ಮಂಗಾ, ಅಧ್ಯಕ್ಷ ಮಂಡಳಿ ಸದಸ್ಯ ಸೂರ್ಯಕಾಂತ ನಿಂಬಾಳ್ಕರ್, ಸಮಿತಿಯ ಸಂಚಾಲಕರಾದ ಅರ್ಜುನ ಭದ್ರೆ, ಪ್ರಭು ಖಾನಾಪುರೆ, ಡಾ.ಅನಿಲ್ ಟೆಂಗಳಿ, ಸಂತೋಷ ಮೇಲ್ಮಿನಿ, ಸುನೀಲ್ ಮಾನಪಡೆ, ಎಂ.ಬಿ.ಸಜ್ಜನ್, ಹಣಮಂತ ಇಟಗಿ, ದತ್ತಾತ್ರೇಯ ಇಕ್ಕಳಕಿ, ದತ್ತಾತ್ರೇಯ ಕುಡುಕಿ, ಶ್ರೀಮಂತ ಬಿರಾದಾರ, ಕೋದಂಡ ರಾಮ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.