ಕಲಬುರಗಿ: 2021ನೇ ಸಾಲಿನಲ್ಲಿ ಮಹಾನಗರ ಪಾಲಿಕೆಯಲ್ಲಿ ಆಯ್ಕೆಯಾದ ಪೌರಕಾರ್ಮಿಕರಿಗೆ ನೇರ ಪಾವತಿ ಹಾಗೂ ನೇರ ನೇಮಕಾತಿಯ ಆದೇಶ ಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಜಿಲ್ಲಾ ಘಟಕದ ಮುಖಂಡರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಾಲಿಕೆಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ 2018ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಸುಮಾರು 1,200ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಖಾಲಿ ಇದ್ದ 258 ಹುದ್ದೆಗಳ ಪೈಕಿ ಕೆಲವರು ನೇರ ನೇಮಕಾತಿಯಲ್ಲಿ ಪೌರಕಾರ್ಮಿಕರಾಗಿ ಆಯ್ಕೆಯಾದರು. ಮೂರು ವರ್ಷಗಳ ನಂತರ 2021ರಲ್ಲಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ್ದರು. ಇಲ್ಲಿಯವರೆಗೂ ಆದೇಶ ಪತ್ರ ನೀಡಿಲ್ಲ ಎಂದು ಆರೋಪಿಸಿದರು.
2018ರಲ್ಲಿ ಆಯ್ಕೆಯಾದ 132 ಪೌರಕಾರ್ಮಿಕರಲ್ಲಿ ಕೆಲವರು ಮರಣಹೊಂದಿದ್ದಾರೆ. ಮೃತರ ಕುಟುಂಬ ಸದಸ್ಯರು ಬೀದಿಗೆ ಬಿದ್ದಿದ್ದಾರೆ. ವಯೋಮಿತಿ ಮೀರುತ್ತಿದ್ದು, ಆತಂಕದ ಸ್ಥಿತಿಯಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಕೂಡಲೇ ಪಟ್ಟಿಯಲ್ಲಿ ಆಯ್ಕೆಯಾದವರಿಗೆ ನೇರ ಪಾವತಿ ಮತ್ತು ನೇರ ನೇಮಕಾತಿ ಪಟ್ಟಿಯಂತಹ ಆದೇಶ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣು ಅತನೂರು, ಪ್ರಮುಖರಾದ ಅನಿಲ್ ಚಕ್ರ, ಪ್ರಮೋದ ದೇವಳಗುಡ್ಡ, ಅವಿನಾಶ ಕಪನೂರ, ಆನಂದ ಸೂರ್ಯವಂಶಿ, ಲೋಕೇಶ ದೊಡ್ಡಮನಿ, ವೆಂಕಟರೆಡ್ಡಿ, ಸದಾನಂದ ಮೇತ್ರೆ, ಮಶಾಕ್ ಅಲಿ, ಶರಣಗೌಡ ಪಾಟೀಲ, ಅರುಣ ಕೋಟೆ, ರವಿ ಶಿಂಧೆ, ಶರಣಪ್ಪ ಇಟಗಿ, ಅನಿಲಕುಮಾರ ಚಾಂಬಾಳ್ಕರ್, ಮುಕರಂ ಜಾನ್, ಹೇಮಂತ್, ಭೀಮಕುಮಾರ, ಮಹೇಶ ಠಾಕೂರ, ಮಹೇಶ ಗಾಜಿಪುರ, ಪ್ರಸನ್ನ, ಶಿವಕುಮಾರ ಕಪನೂರ ಸೇರಿ ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.