ADVERTISEMENT

27ರಂದು ರಾಷ್ಟ್ರೀಯ ಹೆದ್ದಾರಿ ತಡೆಗೆ ನಿರ್ಧಾರ

ಬಗೆಹರಿಯದ ದೋಷಪೂರಿತ ಪಹಣಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 4:32 IST
Last Updated 24 ಮೇ 2022, 4:32 IST
ದೋಷಪೂರಿತ ಪಹಣಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮೇ.೨೭ರ ರಾಷ್ಟ್ರೀಯ ಹೆದ್ದಾರಿ ತಡೆ ನಿಮಿತ್ತ ಸೋಮವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಶಿವಕುಮಾರ ಆಂದೋಲ ಮಾತನಾಡಿದರು. ಚೌಡಪ್ಪ ಗಂಜಿ, ಗುಂಡಣ್ಣ ಎಂ ಕೆ ಇದ್ದರು
ದೋಷಪೂರಿತ ಪಹಣಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮೇ.೨೭ರ ರಾಷ್ಟ್ರೀಯ ಹೆದ್ದಾರಿ ತಡೆ ನಿಮಿತ್ತ ಸೋಮವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಶಿವಕುಮಾರ ಆಂದೋಲ ಮಾತನಾಡಿದರು. ಚೌಡಪ್ಪ ಗಂಜಿ, ಗುಂಡಣ್ಣ ಎಂ ಕೆ ಇದ್ದರು   

ಹಲಕರ್ಟಿ(ವಾಡಿ): ಜಮೀನು ಕಾಗದ ಪತ್ರಗಳ ದೋಷ ಸರಿಪಡಿಸುವಂತೆ ಕಳೆದ ಹಲವು ವರ್ಷಗಳಿಂದ ವಿವಿಧ ಹಂತಗಳಲ್ಲಿ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆಗೆ ತಾಲ್ಲೂಕು ಆಡಳಿತ ಸ್ಪಂದಿಸಿಲ್ಲ. ಸಮಸ್ಯೆ ಪರಿಹರಿಸದೇ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ನೀತಿ ಖಂಡಿಸಿ ಮೇ 27 ರಂದು ಹಲಕರ್ಟಿ ಗ್ರಾಮದಲ್ಲಿ ಕಲಬುರ್ಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ– 150 ತಡೆದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದೇವೆ ಎಂದು ಅಖಿಲ ಭಾರತ ಕೃಷಿ ಖೇತ್ ಮಜ್ದೂರ ಸಂಘಟನೆ(ಎಐಕೆಕೆಎಂಎಸ್) ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ ಆಂದೋಲಾ ತಿಳಿಸಿದರು.

ಸೋಮವಾರ ಹಲಕರ್ಟಿ ಗ್ರಾಮದಲ್ಲಿ ಏರ್ಪಡಿಸಲಾದ ರೈತರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎತ್ತಿನ ಬಂಡಿ ಮೆರವಣಿಗೆ ಮೂಲಕ ತಹಶೀಲ್ದಾರ ಕಚೇರಿಗೆ ಮುತ್ತಿಗೆ, ಜಿಪಂ ಕಚೇರಿ ಮುಂದೆ ಪ್ರತಿಭಟನೆ, ಸಹಿಸಂಗ್ರಹ ಅಭಿಯಾನದಂತಹ ಹಲವು ರೀತಿಯ ಹೋರಾಟ ನಡೆಸಲಾಗಿದೆ. ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದ ಸಮಯದಲ್ಲಿ ಸಮಸ್ಯೆ ಹೇಳಿಕೊಳ್ಲಲಾಗಿದೆ. 15 ದಿನದಲ್ಲಿ ಸಮಸ್ಯೆ ಪರಿಹರಿಸುವುದಾಗ ನಿಡಿದ್ದ ಭರವಸೆ ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಖಂಡಿಸಿ ಗ್ರಾಮದ ರೈತರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಚುರುಕು ಮುಟ್ಟಿಸಲು ಸಜ್ಜಾಗಿದ್ದಾರೆ ಎಂದರು.

ಗ್ರಾಮದ ಪ್ರತಿ ರೈತರ ಜಮೀನು ಕಾಗದ ಪತ್ರಗಳು ದೋಷದಿಂದ ಕೂಡಿವೆ. ಪಹಣಿ ಪತ್ರ, ಹೋಲ್ಡಿಂಗ್, ಜಮೀನು ನಕಾಶೆಗಳು ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ. ಇದರಿಂದ ಜಮೀನುಗಳ ಪರಭಾರೆ ನಡೆಯದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.8– 10 ವರ್ಷಗಳ ಹಿಂದೆ ಖರೀದಿ ಮಾಡಲಾಗಿರುವ ಜಮೀನುಗಳು ನೊಂದಣಿಯಾಗುತ್ತಿಲ್ಲ. ಇದು ಗ್ರಾಮದಲ್ಲಿ ಅಶಾಂತಿ ಹಾಗೂ ವೈಮನಸ್ಸಿಗೆ ಕಾರಣವಾಗುತ್ತಿದೆ ಎಂದರು.

ADVERTISEMENT

ಕಷ್ಟ ಕಾಲದಲ್ಲಿ ಜಮೀನು ಮಾರಿದ ರೈತರಿಗೆ ಜಮೀನು ನೊಂದಣಿಯಾಗದೇ ಹಣ ಕೈಗೆ ಸಿಗುತ್ತಿಲ್ಲ. ರೈತರ ಕೆಲವು ಜಮೀನುಗಳ ಕಾಗದ ಪತ್ರಗಳಲ್ಲಿ ಕರ್ನಾಟಕ ಸರ್ಕಾರಕ್ಕೆ ವರ್ಗಾವಣೆಯಾಗಿರುವ ಅಂಶ ಬರುತ್ತಿದೆ. ಇದರಿಂದ ರೈತರು ಅಕ್ಷರಶಃ ನೆಮ್ಮದಿ ಕಳೆದುಕೊಂಡು ಕಂಗಲಾಗಿದ್ದಾರೆ. ಸಮಸ್ಯೆ ಪರಿಹರಿಸಬೇಕಾದ ತಾಲ್ಲೂಕು ಆಡಳಿತ ಗಾಡ ನಿದ್ರೆಗೆ ಶರಣಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಮೇ 27ರ ರೈತರ ಹೋರಾಟವನ್ನು ಇಡೀ ಗ್ರಾಮಸ್ಥರು ಬೆಂಬಲಿಸಿ ಬೀದಿಗಿಳಿಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಸಮಿತಿ ಅಧ್ಯಕ್ಷ ಚೌಡಪ್ಪ ಗಂಜಿ, ಮುಖಂಡರಾದ ಗುಂಡಣ್ಣ ಎಂ.ಕೆ, ಭೀಮರಾಯ ಇಸಬಾ, ವಿಠ್ಠಲ ರಾಠೋಡ, ಸಾಬಣ್ಣ ಇರಗೊಂಡ, ನಾನಾಸಾಹೇಬ, ಬಸ್ಸಪ್ಪ ನಾಲವಾರ, ಮಶಾಖ ಗವ್ಹಾಂರ, ಈರಣ್ಣ ಹಿಟ್ಟಿನ್ ಹಾಗೂ ಶರಣು ಹೆರೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.