ಕಲಬುರ್ಗಿ: ಜಿಲ್ಲೆಯಾದ್ಯಂತ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಉದ್ಯೋಗ ಖಾತರಿ ಕಾಯಕ ಜೀವಿಗಳ ಸಂಘಟನೆ ವತಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ತಾಜಸುಲ್ತಾನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಯದ್ ಚಿಂಚೋಳಿ, ಚಿತ್ತಾಪುರ ತಾಲ್ಲೂಕು ಮಾಲಗತ್ತಿ, ಶಂಕರವಾಡಿ, ಹಾಗರಗಾ, ನಿಪ್ಪಾಣಿ, ಹೆಬ್ಬಾಳ, ಭೂಪಾಲತೆಗನೂರ, ಅಫಜಲಪುರ ತಾಲ್ಲೂಕು ಕೋಗನೂರ, ಕುಮಸಿ, ಗಣಜಲಖೇಡ, ಆಳಂದ ತಾಲ್ಲೂಕು ತಲೆಕೊಣೆ, ತೆಲ್ಲೂರ, ಕೆರೆ ಅಂಬಲಗಾ ಗ್ರಾಮಗಳಲ್ಲಿನ ಜನರಿಗೆ ಕೂಡಲೇ ಕೆಲಸ ಕೊಡಬೇಕು. ಜಾಬ್ ಕಾರ್ಡ್ ನೀಡುವಲ್ಲಿನ ವಿಳಂಬ ತಪ್ಪಿಸಬೇಕು. ಬಾಕಿ ಕೂಲಿಯನ್ನು ಪಾವತಿಸಬೇಕು. ಕಾಯಕ ಬಂಧುಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
5 ಕಿ.ಮೀ ದೂರ ಕೆಲಸ ನೀಡುತ್ತಿರುವುದರಿಂದ ಸಾರಿಗೆ ವ್ಯವಸ್ಥೆ ಒದಗಿಸಬೇಕು. 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೂ ಕೆಲಸ ಕೊಡಬೇಕು. ಕೆಲಸದ ಜಾಗದಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಅಧ್ಯಕ್ಷೆ ನೀಲಾ ಕೆ., ಗೌರವ ಅಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ಕಾರ್ಯದರ್ಶಿ ಅಶ್ವಿನಿ ಮದನಕರ್, ಸಹ ಕಾರ್ಯದರ್ಶಿ ನಂದಾದೇವಿ ಮಂಗೊಂಡಿ, ಖಜಾಂಚಿ ಡಾ. ಪ್ರಭು ಖಾನಾಪುರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.