ಕಲಬುರಗಿ: ಇಲ್ಲಿನ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸೋಮವಾರ, ಬಾಲಕಿಯೊಬ್ಬಳು ಪೊಲೀಸ್ ವಾಹನದಲ್ಲಿ ಇಣುಕಿ ತನ್ನ ಅಮ್ಮನ ಮುಖ ನೋಡಲು ಹವಣಿಸುತ್ತಿದ್ದಳು. ಬಂಧನದಲ್ಲಿರುವ ತಾಯಿ ಕೂಡ ವಾಹನದೊಳಗಿಂದಲೇ ಮಗಳತ್ತ ನೋಡಿ ಭಿಕ್ಕಳಿಸಿದರು.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಬಂಧಿಸಲಾದ ಆರು ಆರೋಪಿಗಳನ್ನು, ಸಿಐಡಿ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಕರೆತಂದು ಹೆಚ್ಚಿನ ಪರಿಶೀಲನೆ ನಡೆಸಿದರು. ಬಂಧಿತರಾದ ಮೂವರು ಮೇಲ್ವಿಚಾರಕಿಯರ ಪೈಕಿ ಒಬ್ಬರ ಪುತ್ರಿ ಅಮ್ಮನನ್ನು ನೋಡಲುಬಂದಿದ್ದಳು.
‘ಕಳೆದ ನಾಲ್ಕು ದಿನಗಳಿಂದ ಪುಟ್ಟಿ ಸರಿಯಾಗಿ ಊಟ ಮಾಡುತ್ತಿಲ್ಲ, ರಾತ್ರಿ ನಿದ್ರೆ ಮಾಡುತ್ತಿಲ್ಲ. ತನ್ನ ಅವ್ವ ಯಾವಾಗ ಮನೆಗೆ ಬರುತ್ತಾಳೆ ಎಂದು ಕೇಳುತ್ತಿದ್ದಾಳೆ. ಇವತ್ತು ಪೊಲೀಸರು ಜ್ಞಾನಜ್ಯೋತಿ ಶಾಲೆಗೆ ಅವರನ್ನು ಕರೆತರುತ್ತಾರೆ ಎಂಬ ಸುದ್ದಿ ಕೇಳಿ, ಮಗಳನ್ನು ನಾನೇ ಇಲ್ಲಿಗೆ ಕರೆತಂದೆ. ತಾಯಿ ಪೊಲೀಸ್ ವಾಹನದಲ್ಲಿ ಹತ್ತುವಾಗ ದೂರದಿಂದಲೇ ನೋಡಿದ್ದಾಳೆ’ ಎಂದು ಅವರ ಸಂಬಂಧಿ ಹೇಳಿದರು.
ದಿವ್ಯಾ ಹಾಗರಗಿ ಪತ್ತೆಗೆ ತೀವ್ರ ಶೋಧ:ಅಕ್ರಮ ನಡೆದಿದೆ ಎನ್ನಲಾದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಪತ್ತೆಗೆ ಸಿಐಡಿ ಅಧಿಕಾರಿಗಳು ಸೋಮವಾರ ಕೂಡ ಶೋಧ ನಡೆಸಿದರು. ಅವರು ಇರುವಿಕೆ ಬಗ್ಗೆ ಮೂರು ಬಗೆಯ ಮಾಹಿತಿ ಬಂದಿದ್ದು,ಈ ಮೂರೂ ದೃಷ್ಟಿಕೋಣದಲ್ಲಿ ತನಿಖೆ ನಡೆಸಲಾಗುವುದು ಎಂದು ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.