ಪ್ರಾತಿನಿಧಿಕ ಚಿತ್ರ
ಜೇವರ್ಗಿ: ತಾಲ್ಲೂಕಿನ ನಾರಾಯಣಪುರ ಗ್ರಾಮದ ರಶೀದ್ ದಸ್ತಗೀರ್ ಇನಾಮದಾರ್ ಮುತ್ಯಾ ಎಂಬುವವರ ವಿರುದ್ದ ಗ್ರಾಮಸ್ಥರೇ ತಿರುಗಿಬಿದ್ದ ಘಟನೆ ಗುರುವಾರ ನಡೆದಿದೆ.
ಕಳೆದ ಕೆಲ ದಿನಗಳಿಂದ ಗ್ರಾಮದ ಹಜರತ್ ಇಮಾಮ್ ಖಾಸಿಂ ದರ್ಗಾದಲ್ಲಿ ರಶೀದ್ ಮುತ್ಯಾ ಎಂಬುವವರು ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಮೋಸಗೊಳಿಸುತ್ತಿದ್ದಾರೆ.
ವಿಶೇಷವಾಗಿ ಬಡ ಮತ್ತು ಮುಗ್ಧ ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಸುಳ್ಳು ಭರವಸೆ ನೀಡಿ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ. ಕಷ್ಟ ದೂರವಾಗುತ್ತದೆ. ದೇವರ ಆಶೀರ್ವಾದ ಕೊಡುತ್ತೇನೆ ಎಂದು ಜನರಿಂದ ಹಣ, ಆಭರಣ ಮತ್ತು ವ್ಯಯಕ್ತಿಕ ಲಾಭ ಪಡೆಯುತ್ತಿದ್ದಾರೆ. ಮಹಿಳೆಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಾ, ಅವಮಾನ ಮಾಡುತ್ತಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಘಟನೆಗಳಿಂದ ಗ್ರಾಮದ ಜನರಲ್ಲಿ ಮೂಢನಂಬಿಕೆ ಮತ್ತು ಭಯ ಹೆಚ್ಚಾಗಿದೆ. ಇವರು ಮಾಡುವ ಕೃತ್ಯಗಳು ಮಾನವೀಯತೆ ಮತ್ತು ಧಾರ್ಮಿಕ ನಂಬಿಕೆಗಳ ವಿರುದ್ದವಾಗಿವೆ. ಆದ್ದರಿಂದ ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಗ್ರಾಮಸ್ಥರೊಂದಿಗೆ ದರ್ಗಾಕ್ಕೆ ತೆರಳಿ ರಶೀದ್ ಮುತ್ಯಾ ಜತೆ ವಾಗ್ವಾದ ನಡೆಸಿದರು. ಆಗ ಪೊಲೀಸರು ಮದ್ಯ ಪ್ರವೇಶಿಸಿ ರಶೀದ್ ಮುತ್ಯಾ ಅವರನ್ನು ತಕ್ಷಣ ಅಲ್ಲಿಂದ ಬೇರೆ ಕಡೆ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಬಿಗೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಕಳೆದ ಸೋಮವಾರ ರಶೀದ್ ಮುತ್ಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಣಿಕಂಠ ರಾಠೋಡ ಸರ್ಕಲ್ ಇನ್ಸ್ಪೆಕ್ಟರ್ ರಾಜೇಸಾಬ ನದಾಫ ಅವರ ಮೂಲಕ ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.