
ಆಳಂದ: ‘ಎಲ್ಲ ಜಾತಿ, ಧರ್ಮ, ಭಾಷೆ ಹಾಗೂ ವರ್ಗದ ಜನರ ಭಕ್ತಿ, ಶ್ರದ್ಧಾಕೇಂದ್ರವಾಗಿರುವ ಜಿಡಗಾ ಮಠವು ಕಲ್ಯಾಣ ಕರ್ನಾಟಕದ ಸೌಹಾರ್ದತೆಯ ಪ್ರತೀಕವಾಗಿದೆ’ ಎಂದು ಜಿಡಗಾ, ಮುಗಳಖೋಡದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಶನಿವಾರ ಸಿದ್ದರಾಮ ಶಿವಯೋಗಿಗಳ 22ನೇ ಪುಣ್ಯಸ್ಮರಣೆ ಹಾಗೂ ಮಹಾರಥೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸಿದ್ದರಾಮ ಶಿವಯೋಗಿಗಳ ಸದಾಶಯದಂತೆ ಮಠದಲ್ಲಿ ಉಚಿತ ವಸತಿನಿಲಯದ ಶಾಲೆಯಲ್ಲಿ 600 ವಿದ್ಯಾರ್ಥಿಗಳು ಶಿಕ್ಷಣಾಭ್ಯಾಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸಾವಿರಾರು ಮಕ್ಕಳಿಗೆ ವಸತಿಸಹಿತ ಪ್ರಾಥಮಿಕದಿಂದ ಪದವಿ ಹಂತದವರೆಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ದೊರೆಯಲಿದೆ. ಮುಂದಿನ ಐದು ವರ್ಷದಲ್ಲಿ ಈ ಭಾಗದ ರೈತರಿಗಾಗಿ ಕೆರೆ ನಿರ್ಮಾಣ ಪೂರ್ಣಗೊಳ್ಳಲಿದೆ’ ಎಂದರು.
ಚಿನ್ಮಯಗಿರಿಯ ವೀರಮಹಾಂತ ಸ್ವಾಮೀಜಿ, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ ಮಾತನಾಡಿ, ‘ಪೀಠಾಧಿಪತಿ ಮುರುಘರಾಜೇಂದ್ರ ಶ್ರೀಗಳ ದೂರದೃಷ್ಟಿಯ ಫಲವಾಗಿ ಜಿಡಗಾ ಮಠವು ಹೊಸ ಸ್ವರೂಪದಲ್ಲಿ ಪ್ರಗತಿ ಕಂಡಿದೆ. ಇದು ಈಗ ನಮ್ಮ ಭಾಗದ ದೈವಶಕ್ತಿಕೇಂದ್ರವಾಗಿದೆ’ ಎಂದರು.
ಯಳಸಂಗಿಯ ಗುರುಪಾದಲಿಂಗ ಸ್ವಾಮೀಜಿ, ನಿಂಬರ್ಗಾ ಸ್ವಾಮೀಜಿ, ಬಸವಣ್ಣಪ್ಪ ದೇವರು, ಖಾನಾಪುರದ ಯೋಗಿರಾಜ ಸ್ವಾಮೀಜಿ ಹಾಗೂ ಪ್ರಮುಖರಾದ ಸಿದ್ದರಾಮ ಪ್ಯಾಟಿ, ಸಂಗ್ರಾಮ ಬಿರಾದಾರ, ಮುರುಳಿಧರ ಏಕಲಾರಕರ್, ಗೀತಾ ಚಿದ್ರಿ, ರೇವಣಪ್ಪ ನಾಗೂರೆ, ರಾಜು ಪಾಟೀಲ, ದೇವರಾಯ ಜವಳಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಕ್ತರಿಂದ ಮುರುಘರಾಜೇಂದ್ರ ಶ್ರೀಗಳ ತುಲಾಭಾರ ಸೇವೆ, ಸುವರ್ಣ ಕಿರೀಟಧಾರಣೆ ನಡೆಯಿತು.
ಶರಣಬಸವೇಶ್ವರ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಗುರುಪಾದಲಿಂಗ ಸ್ವಾಮೀಜಿ ಅವರಿಗೆ ಜಿಡಗಾ ಮಠದಿಂದ ವಿಶೇಷ ಸನ್ಮಾನ ನಡೆಯಿತು.
ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಸಂಗ್ರಾಮ ಬಿರಾದಾರ ಭಾಗವಹಿಸಿದ್ದರು.
ಶಾಸಕ ಬಿ.ಆರ್.ಪಾಟೀಲ ಅವರ ವಿಶೇಷ ಪ್ರಯತ್ನದಿಂದ ₹25 ಕೋಟಿ ಅನುದಾನದಲ್ಲಿ ಜಿಡಗಾ ಕೆರೆ ನಿರ್ಮಾಣ ಮಂಜೂರಾಗಿದೆ. ಮುಂಬರುವ ವರ್ಷದಲ್ಲಿ ಸುತ್ತಲಿನ ರೈತರ ಹೊಲಗದ್ದೆಗಳು ಸಮೃದ್ಧವಾಗಿ ಜಿಡಗಾ ಮಠವು ಹಚ್ಚಹಸಿರಿನ ತಾಣವಾಗಲಿದೆಮುರುಘರಾಜೇಂದ್ರ ಸ್ವಾಮೀಜಿ ಪೀಠಾಧಿಪತಿ ಜಿಡಗಾ
ರಥ ಎಳೆದು ಸಂಭ್ರಮಿಸಿದ ಭಕ್ತರು ಸಿದ್ದರಾಮ ಶಿವಯೋಗಿಗಳ ಪುಣ್ಯಸ್ಮರಣೆ ನಿಮಿತ್ತ ಮಠದ ವಿಶಾಲ ಪ್ರಾಂಗಣದಲ್ಲಿ ಗೋದೂಳಿ ಸಮಯದಲ್ಲಿ ಮಹಾರಥೋತ್ಸವವು ಭಕ್ತರ ಹರ್ಷೋದ್ಘಾರದ ನಡುವೆ ಸಂಭ್ರಮದಿಂದ ಜರುಗಿತು. ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಮಹಾರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಿಕ್ಕಿರಿದ ತುಂಬಿದ ಭಕ್ತರು ಸಿದ್ದರಾಮ ಶಿವಯೋಗಿ ಮಹಾರಾಜ ಕೀ ಜೈ ಮುರುಘರಾಜೇಂದ್ರ ಮಹಾಸ್ವಾಮೀಜಿ ಕೀ ಜೈ ಎಂಬ ಘೋಷಣೆಗಳೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.