ADVERTISEMENT

ಕಾಳಸಂತೆಗೆ ಸಾಗಿಸುತ್ತಿದ್ದ 600 ಚೀಲ ಅಕ್ಕಿ ಜಪ್ತಿ

ಆಹಾರ ಇಲಾಖೆ ಅಧಿಕಾರಿಗಳ ತಂಡದಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 9:03 IST
Last Updated 22 ಜುಲೈ 2020, 9:03 IST
ಕಲಬುರ್ಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಜಪ್ತಿ ಮಾಡಿಕೊಂಡಿರುವ ಕಾಳಸಂತೆಗೆ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಲೋಡ್ ಲಾರಿ
ಕಲಬುರ್ಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಜಪ್ತಿ ಮಾಡಿಕೊಂಡಿರುವ ಕಾಳಸಂತೆಗೆ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಲೋಡ್ ಲಾರಿ   

ಕಲಬುರ್ಗಿ: ಪಡಿತರ ಚೀಟಿದಾರರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಸುಮಾರು 600 ಚೀಲ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜತೆಗೂಡಿಕೊಂಡು ಕಾರ್ಯಾಚರಣೆ ನಡೆಸಿ ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿಯನ್ನು ಕಾಳ ಸಂತೆಗೆ ಸಾಗಿಸಲಾಗುತ್ತಿದೆ ಎಂದು ಇಲಾಖೆಯ ಸಹಾಯವಾಣಿಗೆ ಬಂದ ಮಾಹಿತಿಯನ್ನು ಆಧರಿಸಿ ಆಹಾರ ಇಲಾಖೆ ಇನ್‌ಸ್ಪೆಕ್ಟರ್‌ ಭಾರತಿ ಸೂರ್ಯಕಾಂತ ಪಾಟೀಲ ಅವರ ನೇತೃತ್ವದಲ್ಲಿ ಅಮರೇಶ, ಶ್ರೀನಿವಾಸ ಇತರ ಅಧಿಕಾರಿಗಳು ಕೂಡಿಕೊಂಡು ನಗರದ ರಾಮ ಮಂದಿರ ಬಳಿಯಲ್ಲಿ ಶೋಧ ನಡೆಸಿದಾಗ, ಅಲ್ಲಿನ ಹೋಟೆಲ್ ಮುಂಭಾಗದಲ್ಲಿ ಲಾರಿಯೊಂದು ಲೋಡ್ ಮಾಡಿಕೊಂಡು ನಿಂತಿದ್ದನ್ನು ಕಂಡು ವಿಚಾರಣೆ ನಡೆಸಿದರು. ಅಧಿಕಾರಿಗಳು ಬರುವ ಮಾಹಿತಿ ಪಡೆದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ವಿಶ್ವವಿದ್ಯಾಲ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪಿಎಸ್‌ಐ ನಾಗಭೂಷಣ ಮತ್ತು ಸಿಬ್ಬಂದಿ ದೌಡಾಯಿಸಿ ಕ್ಲೀನರ್ ಇಸ್ಮಾಯಿಲ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಲಾರಿಯಲ್ಲಿ 50 ಕೆಜಿಯ 600 ಚೀಲಗಳಿದ್ದು ಸುಮಾರು ₹ 6 ಲಕ್ಷ ಮೊತ್ತದ ಅಕ್ಕಿ ಇರಬಹುದು ಎಂದು ಅಂದಾಜಿಲಾಗಿದೆ. ಲಾರಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಅಕ್ಕಿ ಚೀಲಗಳ ಮೇಲೆ ಹರಿಯಾಣ ಸರ್ಕಾರ ಎಂದು ಬರೆದಿದೆ. ಚೀಲಗಳನ್ನು ಬ್ಯಾಗ್ ಮಾಡಿ ಕಳ್ಳತನದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದೆ ಎಂದು ದೂರಲಾಗಿದೆ.

ADVERTISEMENT

ಭಾರತಿ ಪಾಟೀಲ ಅವರು ನೀಡಿದ ದೂರಿನ ಮೇರೆಗೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.