ಕಲಬುರಗಿ: ಪಿಕಪ್ ವಾನಹದಲ್ಲಿ ಅನಧಿಕೃತವಾಗಿ ಸಾಗಣೆ ಮಾಡುತ್ತಿದ್ದ ₹1.41 ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಳಂದ್ ಚೆಕ್ಪೋಸ್ಟ್ ಮಾರ್ಗವಾಗಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.
₹1.41 ಲಕ್ಷ ಮೌಲ್ಯದ 43 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ₹ 6 ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಚಾಲಕ ಕಿರಣ ತಿಮ್ಮಣ್ಣ, ಅಕ್ಕಿಯ ಮಾಲೀಕ ಸಂತೋಷಗೌಡ ಹಾಗೂ ಕೃಷ್ಣ ಲಾತೂರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾತ್ರೆಯಲ್ಲಿ ಕಳ್ಳರ ಕೈಚಳಕ: ಐವರ ಚಿನ್ನಾಭರಣ ಕಳವು
ಶರಣಬಸವೇಶ್ವರರ ಜಾತ್ರೆಯ ರಥೋತ್ಸವದ ವೇಳೆ ಕಳ್ಳರು ತಮ್ಮ ಕರಾಮತ್ತು ತೋರಿದ್ದು, ₹1.82 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕದ್ದಿದ್ದಾರೆ.
ರಥೋತ್ಸವದ ಜನಜಂಗುಳಿ ನಡುವೆ ಮಹಾದೇವಪ್ಪ ಸಿದ್ದಣ್ಣ ಅವರ ಕೊರಳಲ್ಲಿದ್ದ ₹45 ಸಾವಿರ ಮೌಲ್ಯದ ಚಿನ್ನದ ಸರ, ಡಾ. ಉಮೇಶಚಂದ್ರ ಗುರುಗುಂಟಿ ಅವರ ₹75 ಸಾವಿರ ಮೌಲ್ಯದ ಚೈನ್, ನಾಗಮ್ಮ ಬಸವರಾಜ ಅವರ ಕೊರಳಲ್ಲಿದ್ದ ತಾಳಿ ಸೇರಿ ₹20 ಸಾವಿರ ಮೌಲ್ಯದ ಚಿನ್ನಾಭರಣ, ಸೌಭಾಗ್ಯ ಯಾದವ ಅವರ ಕೊರಳಿಂದ 10 ಗ್ರಾಂ. ಚಿನ್ನದ ತಾಳಿ ಹಾಗೂ ವಿಠ್ಠಲ ಬಿರಾದಾರ ಅವರಿಂದ ₹22 ಸಾವಿರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಈ ಸಂಬಂಧ ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.