ಕಲಬುರಗಿ: ವಿಜಯ ದಶಮಿ ಪ್ರಯುಕ್ತ ಅಕ್ಟೋಬರ್ 5ರಂದು ಸಂಜೆ 5ಕ್ಕೆ ಶರಣಬಸವೇಶ್ವರ ಸಂಸ್ಥಾನದ ಜಾತ್ರಾ ಮೈದಾನದಲ್ಲಿ 50 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ ಮಾಡಲಾಗುವುದು ಎಂದು ದಸಹರಾ ಮಹೋತ್ಸವ ರಾವಣ ದಹನ ಆಯೋಜಕ ರಾಜು ಭವಾನಿ ತಿಳಿಸಿದರು.
‘ನಮ್ಮೊಳಗಿನ ನಕಾರಾತ್ಮಕ ಭಾವನೆಗಳು ದೂರಗೊಳಿಸಿ ಸಕಾರಾತ್ಮಕ ಭಾವನೆ ಮೂಡಿಸುವ ಸಂದೇಶ ಹೊತ್ತಿರುವ ರಾವಣ ದಹನ ಕಾರ್ಯಕ್ರಮ ಆಯೋಜಿಸಲಾಗಿದೆ. ದಶಕಂಠ ರಾವಣನನ್ನು ಸಂಹರಿಸಿದ ವಿಜಯೋತ್ಸವದ ನಿಮಿತ್ತ ದೇಶದ ವಿವಿಧೆಡೆ ರಾವಣ ಮೂರ್ತಿಯನ್ನು ದಹಿಸಲಾಗುತ್ತದೆ. ಅಂದು ಧರ್ಮ ಸಂಸ್ಕೃತಿ ರಕ್ಷಣೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ಜಾಗೃತಿಯೊಂದಿಗೆ ಆಚರಣೆಯ ಮಹತ್ವವನ್ನು ಸಾರಲಾಗುತ್ತದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶರಣಬಸವೇಶ್ವರ ಮಹಾದಾಸೋಹ ಪೀಠದ ಪೀಠಾಧಿಪತಿ ದೊಡ್ಡಪ್ಪ ಅಪ್ಪ ರಾವಣ ದಹನ ಮಾಡುವರು. ಉತ್ತರಾದಿಮಠದ ಸತ್ಯಾತ್ಮತೀರ್ಥರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ, ಡಾ. ರಾಜಶೇಖರ ಶಿವಾಚಾರ್ಯರು ರಾವಣ ದಹನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಮುಖಂಡರಾದ ಗಿರೀಶ ಇನಾಮದಾರ, ರಾಜು ಜೈನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.