ADVERTISEMENT

ಮೊದಲು ಲಸಿಕೆ ಪಡೆದವರ ಮನದಾಳ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:09 IST
Last Updated 17 ಜನವರಿ 2021, 1:09 IST
ಬಸವರಾಜ ಬಿರಾದಾರ
ಬಸವರಾಜ ಬಿರಾದಾರ   

ನಾನು ಆರೋಗ್ಯವಾಗಿದ್ದೇನೆ
ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕೋವಿಶೀಲ್ಡ್‌ ಲಸಿಕೆ ಪಡೆದಿದ್ದು ನಾನೇ ಎಂದು ಖುಷಿಯಾಗುತ್ತಿದೆ. ಲಸಿಕೆ ಪಡೆಯಲು ಏನೂ ಭಯ ಇರಲಿಲ್ಲ. ಸಹಜವಾದ ಚುಚ್ಚುಮದ್ದಿನ ಹಾಗೇ ಇದೆ. ಆರೋಗ್ಯದಲ್ಲೂ ಏನೂ ವ್ಯತ್ಯಾಸ ಕಂಡಿಲ್ಲ. ನಾನು ‘ಕೊರೊನಾ ಮುಕ್ತ’ನಾದೆ ಎಂಬುದೇ ಹೆಮ್ಮೆ. ಅರ್ಧ ಗಂಟೆ ವಿಶ್ರಾಂತಿ ಪಡೆದು, ಇತರ ಸಿಬ್ಬಂದಿ ಜತೆಗೆ ಅನುಭವ ಹಂಚಿಕೊಂಡು ಮನೆಗೆ ಬಂದೆ.
–ಅನಂತರಾಜ, ಡಿ– ದರ್ಜೆ ನೌಕರ, ಜಿಮ್ಸ್‌, ಕಲಬುರ್ಗಿ

2ನೇ ಡೋಸ್‌ ಪಡೆಯುತ್ತೇನೆ
ನಾನು ಪ್ರಥಮವಾಗಿ ಕೊರೊನಾ ಲಸಿಕೆ ಪಡೆದುಕೊಂಡಿದ್ದೇನೆ. ಆರಂಭದಲ್ಲಿ ಸೂಚಿ ಚುಚ್ಚಿದಷ್ಟೇ ನೋವು ಆಯಿತು. ನಂತರ ಯಾವುದೇ ಪರಿಣಾಮವಾಗಿಲ್ಲ. ಮನಸ್ಸಿನಲ್ಲಿ ಒಂದು ರೀತಿಯ ಸಮಾಧಾನ ಉಂಟಾಗಿದೆ. ಮತ್ತೆ 28 ದಿನಗಳ ನಂತರ 2ನೇ ಡೋಸ್ ಪಡೆದುಕೊಳ್ಳುತ್ತೇನೆ.
–ಬಸವರಾಜ ಬಿರಾದಾರ, ಸಾರ್ವಜನಿಕ ಆಸ್ಪತ್ರೆಯ ಡಿ– ಗ್ರೂಪ್ ಸಿಬ್ಬಂದಿ, ಅಫಜಲಪುರ

ಎಲ್ಲರೂ ಪಡೆಯಬಹುದು
ಕೋವಿಡ್‌- 19ರ ಬಗ್ಗೆ ನನ್ನಲ್ಲಿ ಬಹಳ ಆತಂಕವಿತ್ತು. ಈಗ ಲಸಿಕೆ ಪಡೆದ ಕಾರಣ ಧೈರ್ಯ ಬಂದಿದೆ. ಸದೃಡವಾಗಿದ್ದು, ಆರೋಗ್ಯವಂತನಾಗಿದ್ದೇನೆ. ಹಾಗಾಗಿ, ನನಗೆ ಅಡ್ಡ ಪರಿಣಾಮಗಳ ಬಗ್ಗೆಯೂ ಭಯ ಇಲ್ಲ. ಎಲ್ಲರೂ ಪಡೆಯಬಹುದು.
–ಕಾಶಿನಾಥ ಕೊಡಲಹಂಗರಗಾ, ಸಿಬ್ಬಂದಿ, ಸಾರ್ವಜನಿಕ ಆಸ್ಪತ್ರೆ, ಆಳಂದ

ADVERTISEMENT

ನಂಬಿಕೆ ಇದೆ
ನನಗೆ ಭಾರತೀಯ ವಿಜ್ಞಾನಿಗಳ ಮೇಲೆ ಅಪಾರ ನಂಬಿಕೆ ಇದೆ. ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಹಿಮ್ಮೆಟ್ಟಿಸಲು ವಿಜ್ಞಾನಿಗಳು ಲಸಿಕೆ ಕಂಡುಕೊಂಡಿದ್ದು ಹೆಮ್ಮೆ ಸಂಗತಿ. ಚಿಂಚೋಳಿ ತಾಲ್ಲೂಕಿನಲ್ಲಿ ಮೊದಲಿಗನಾಗಿ ನಾನೇ ಲಸಿಕೆ ಪಡೆದಿದ್ದು ಖುಷಿಯಾಗಿದೆ. ನನ್ನ ಮೇಲೆ ನನಗೆ ಅಭಿಮಾನ ಹೆಚ್ಚಾಗಿದೆ.
–ಜಗದೇವಪ್ಪ ಜಾಬಶೆಟ್ಟಿ, ಡಿ– ಗ್ರೂಪ್‌ ನೌಕರ, ತಾಲ್ಲೂಕು ಆಸ್ಪತ್ರೆ, ಚಿಂಚೋಳಿ

ಏನೂ ತೊಂದರೆ ಆಗಲಿಲ್ಲ
ಕೋವಿಡ್ ವ್ಯಾಕ್ಸಿನ್ ಪಡೆಯುವಾಗ ಸ್ವಲ್ಪ ಭಯ ಆವರಿಸಿತ್ತು. ಮೊದಲು ಆರೋಗ್ಯ ತಪಾಸಣೆ ನಡೆಸಿದ ವೈದ್ಯಾಧಿಕಾರಿಗಳು ಕೋಣೆಯಲ್ಲಿ ಇರುವಂತೆ ಸೂಚಿಸಿದರು. ನಂತರ ವ್ಯಾಕ್ಸಿನ್ ಪಡೆಯುವಾಗ ಆಸ್ಪತ್ರೆ ವೈದ್ಯರು ಧೈರ್ಯ ತುಂಬಿದರು. ಮೊದಲ ವ್ಯಾಕ್ಸಿನ್ ಪಡೆದಿರುವುದು ಸಂತಸ ತಂದಿದೆ. ಒಂದು ಗಂಟೆಯವರೆಗೆ ಭಯವಿತ್ತು. ನಂತರ ಸರಿಹೋಯಿತು.
-ಜ್ಯೋತಿ ಗುರುಶಾಂತ ಬಾವಿಮನಿ, ಗ್ರೂಪ್–ಡಿ ಸಿಬ್ಬಂದಿ, ಜೇವರ್ಗಿ

ವೈದ್ಯರು ಧೈರ್ಯ ತುಂಬಿದ್ದಾರೆ
ಮೊದಲು ದೇಹದ ಉಷ್ಣಾಂಶ ಪರೀಕ್ಷಿಸಿ ಕೊಣೆಯಲ್ಲಿರುವಂತೆ ಸೂಚಿಸಿದರು. ನಂತರ ವ್ಯಾಕ್ಸಿನ್ ಪಡೆಯುವಾಗ ಭಯ ಆಯಿತು. ನಮ್ಮ ಆಸ್ಪತ್ರೆಯ ವೈದ್ಯರು ಧೈರ್ಯ ತುಂಬಿದರು. ನಂತರ ಕೊಂಚ ನಿಟ್ಟುಸಿರು ಬಿಟ್ಟೆ. ಮೊದಲು ವಾಕ್ಸಿನ್ ಪಡೆದದ್ದು ಖುಷಿ ತಂದಿದೆ. ಒಂದು ಗಂಟೆಯವರೆಗೆ ಭಯ ಇತ್ತು. ಅದಾದ ಮೇಲೆ ಎಲ್ಲವೂ ಹೋಯಿತು. ಈಗ ಆರಾಮಾಗಿದ್ದೇನೆ.
–ಸಂತೋಷ, ತಾಲ್ಲೂಕು ಆಸ್ಪತ್ರೆ ಸಿಬ್ಬಂದಿ, ಸೇಡಂ

ಆತ್ಮವಿಶ್ವಾಸ ಹೆಚ್ಚಿತು
ಕೊರೊನಾ ವೈರಾಣು ವಿರುದ್ಧ ಹೋರಾಡಿದ ನಾವು ಲಸಿಕೆಗೆ ಹೆದರುವುದರಲ್ಲಿ ಅರ್ಥವಿಲ್ಲ. ಆರಂಭದಲ್ಲಿ ನನಗೂ ಆತಂಕ ಇತ್ತು. ಲಸಿಕೆ ಪಡೆಯುವ ಮುಂಚೆ ಸ್ವಲ್ಪ ಮನದಲ್ಲಿ ಗಲಿಬಿಲಿ ಆಯಿತು. ನಂತರ ಧೈರ್ಯ ಬಂತು. ಇದನ್ನು ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
–ಅಕ್ಷಯಕುಮಾರ, ಡಿ ಗ್ರೂಪ್ ನೌಕರ, ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.