ADVERTISEMENT

‘ಸನ್ಮಾರ್ಗದ ಬದುಕಿಗೆ ಗುರು ಅಗತ್ಯ’

ಕೇಸರ ಜವಳಗಾ: ವೀರಂತೇಶ್ವರರ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 6:48 IST
Last Updated 20 ಏಪ್ರಿಲ್ 2022, 6:48 IST
ಆಳಂದ ತಾಲ್ಲೂಕಿನ ಕೇಸರ ಜವಳಗಾ ಮಠದಲ್ಲಿ ಲಿಂ.ವೀರಂತೇಶ್ವರರ ಪುಣ್ಮಸ್ಮರಣೆ ಕಾರ್ಯಕ್ರಮ ಜರುಗಿತು
ಆಳಂದ ತಾಲ್ಲೂಕಿನ ಕೇಸರ ಜವಳಗಾ ಮಠದಲ್ಲಿ ಲಿಂ.ವೀರಂತೇಶ್ವರರ ಪುಣ್ಮಸ್ಮರಣೆ ಕಾರ್ಯಕ್ರಮ ಜರುಗಿತು   

ಆಳಂದ: ‘ಪ್ರತಿಯೊಬ್ಬ ಮನುಷ್ಯನು ಸನ್ಮಾರ್ಗದಿಂದ ಬದುಕು ಸಾಗಿಸಲು ಯೋಗ್ಯ ಗುರುವಿನ ಕಾರುಣ್ಯ ಅಗತ್ಯವಾಗಿದೆ’ ಎಂದು ನಂದಗಾಂವನ ಪೀಠಾಧಿಪತಿ ರಾಜಶೇಖರ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಕೇಸರ ಜವಳಗಾ ಗ್ರಾಮದಲ್ಲಿನ ವಿರಕ್ತಮಠದಲ್ಲಿ ಲಿಂ.ವೀರಂತೇಶ್ವರರ 40ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ಧರ್ಮಸಭೆ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಮಠಮಾನ್ಯಗಳಿಗೆ ಭಾಷೆ, ಜಾತಿಯ ಗಡಿಗಳು ಇಲ್ಲ, ಭಕ್ತರ ಕಲ್ಯಾಣ ಬಯಸುವದು ಎಲ್ಲ ಮಠಗಳ ಮೊದಲ ಸಂಕಲ್ಪವಾಗಿದೆ. ಕೇಸರ ಜವಳಗಾ ಗಡಿಯಲ್ಲಿದ್ದರೂ ಭಕ್ತರು ಎಲ್ಲಡೆ ಇದ್ದಾರೆ ಎಂದರು.

ADVERTISEMENT

ಪಡಸಾವಳಿ- ಉದಗೀರದ ಡಾ.ಶಂಭುಲಿಂಗ ಸ್ವಾಮೀಜಿ ಮಾತನಾಡಿ, ವೀರಶೈವ-ಲಿಂಗಾಯತ ಮಠಗಳು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂದ್ರ, ತೆಲಂಗಾಣದಲ್ಲಿ ನಿರಂತರವಾಗಿ ಸೇವಾ ಕಾರ್ಯ ಕೈಗೊಳ್ಳುತ್ತಿವೆ. ಇಂತಹ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಲ್ಲಿ ಉತ್ತಮ ಸಂಸ್ಕಾರ, ಮೌಲ್ಯಗಳು ಬೆಳೆಸಲು ಕಾರಣವಾಗಲಿವೆ ಎಂದರು.

ಕೆಸರ ಜವಳಗಾದ ವೀರಂತೇಶ್ವರ ಸ್ವಾಮಿಜಿ ಅಧ್ಯಕ್ಷತೆವಹಿಸಿದರು. ನರೋಣಾದ ಗುರುಮಹಾಂತ ಸ್ವಾಮೀಜಿ, ಕಿಣಿಸುಲ್ತಾನದ ಶಿವಶಾಂತಲಿಂಗ ಸ್ವಾಮೀಜಿ, ಹೊದಲೂರಿನ ವೃಷಭೇಂದ್ರ ಸ್ವಾಮೀಜಿ, ಹಿರೇನಾಗಾಂವನ ಜಯಶಾಂತಲಿಂಗ ಸ್ವಾಮೀಜಿ, ಅಕ್ಕಲಕೊಟದ ಬಸವಲಿಂಗ ಸ್ವಾಮೀಜಿ, ಬಂಗರಗಾದ ಗುರುಲಿಂಗ ಸ್ವಾಮೀಜಿ, ಹತ್ತಿ ಕಣಮಸನ ಪ್ರಭುಕಾಂತ ಸ್ವಾಮೀಜಿ ಉಪಸ್ಥಿತರಿದ್ದರು.

ಗ್ರಾಮದ ಮುಖ್ಯಬೀದಿಗಳಲ್ಲಿ ಲಿಂ.ವೀರಂತೇಶ್ವರ ಸ್ವಾಮೀಜಿ ಹಾಗೂ ಲಿಂ.ಜಡಿಬಸವಲಿಂಗ ಸ್ವಾಮೀಜಿಗಳ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆಯು ಜರುಗಿತು.

ಸಂಗೀತ ಕಾರ್ಯಕ್ರಮ ಹಾಗೂ ಭಕ್ತರಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು.

ಕೇಸರ ಜವಳಗಾ ಸುತ್ತಲಿನ ಗ್ರಾಮಗಳು ಸೇರಿದಂತೆ ಕಲಬುರಗಿ, ಆಳಂದ , ಅಫಜಲಪುರ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.