ಅಫಜಲಪುರ: ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ದತ್ತ ದೇವಸ್ಥಾನ ಇರುವುದರಿಂದ ವರ್ಷದಿಂದ ವರ್ಷಕ್ಕೆ ಯಾತ್ರಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಭಾಗದ ಜನರಿಗೆ ಬಸ್ ಡಿಪೋ ಅವಶ್ಯಕತೆ ಆಗಿದ್ದು ಅದಕ್ಕಾಗಿ ಮಿನಿ ಬಸ್ ಡಿಪೋ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.
ತಾಲ್ಲೂಕಿನ ದೇವಲಗಾಣಗಾಪುರದ ಭೀಮಾನದಿಗೆ ₹ 50 ಲಕ್ಷ ವೆಚ್ಚದ ಬ್ಯಾರೇಜ್ ಕಂ ಬ್ರಿಜ್ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಹಾಗೂ ಲೋಕೋಪಯೋಗಿ ವ್ಯಾಪ್ತಿಗೆ ಬರುವ 2010 - 2011 ಸಾಲಿನ ಧಾರ್ಮಿಕ ದತ್ತಿ ಇಲಾಖೆ ಯೋಜನೆಯಡಿ ₹ 2.82 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ದತ್ತಾತ್ರೇಯ ದೇವಸ್ಥಾನದ ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದರು.
ದೇವಲಗಾಣಗಾಪುರ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಶಾಸಕ ಎಂ.ವೈ. ಪಾಟೀಲ ಅವರು ತಾಲ್ಲೂಕಿನಲ್ಲಿ ಕೆರೆ ತುಂಬುವ ಕಾರ್ಯಕ್ರಮ ಆರಂಭಗೊಳಿಸಿರುವುದು ಜಿಲ್ಲೆಗೆ ಮಾದರಿಯಾಗಿದೆ. ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗಲಿದೆ. ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ಶಾಸಕ ಎಂ.ವೈ.ಪಾಟೀಲ ಅವರು ವಿಧಾನಸಭೆಯಲ್ಲಿ ಅಧಿವೇಶನದಲ್ಲಿ ಮಾತನಾಡಬೇಕು. ನಾನು ವಿಧಾನ ಪರಿಷತ್ತಿನಲ್ಲಿ ಮಾತನಾಡುತ್ತೇನೆ’ ಎಂದು ಹೇಳಿದರು.
ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ತಾ.ಪಂ ಅಧ್ಯಕ್ಷೆ ರುಕ್ಮಿಣಿ ಬಾಬು ಜಮಾದಾರ, ತಾ.ಪಂ ಉಪಾಧ್ಯಕ್ಷರಾದ ಭೀಮಾಶಂಕರ ಹೊನ್ನಕೇರಿ, ಜಿ.ಪಂ ಸದಸ್ಯರಾದ ಅನ್ನಪೂರ್ಣ ಶಿವಶರಣಪ್ಪ ಹೀರಾಪುರ, ತಾ.ಪಂ ಸದಸ್ಯರಾದ ಬಲವಂತ ಜಕಬಾ, ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ, ಶರಣು ಕುಂಬಾರ, ಸಿದ್ದು ಕಲಶೆಟ್ಟಿ, ಸಂಗಣ್ಣ ಹಸರಗುಂಡಗಿ, ಬಾಬಾಗೌಡ ಪಾಟೀಲ್ ತಲ್ಲೂರು, ಸಿದ್ದು ಮಗಿ, ಹುಸ್ಮಾನ್ ಶೇಖ್, ಉದಯ ಭಟ್ಟ, ಮಧುಕರ ಪೂಜಾರಿ, ನಾಗೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.