ADVERTISEMENT

ನಿವೃತ್ತ ಸರ್ಕಾರಿ ನೌಕರನಿಗೆ ₹96 ಲಕ್ಷ ವಂಚನೆ

ಡಿಜಿಟಲ್‌ ಆರೆಸ್ಟ್‌: ಸಿಬಿಐ ಅಧಿಕಾರಿ, ಕೋರ್ಟ್‌ ವಿಚಾರಣೆ ಹೆಸರಿನಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:08 IST
Last Updated 14 ಡಿಸೆಂಬರ್ 2025, 6:08 IST
   

ಕಲಬುರಗಿ: ಇಲ್ಲಿನ ಮೋಮಿನಪುರ ನಿವಾಸಿ, ನಿವೃತ್ತ ನೌಕರ ಮಹೆಮೂದ್‌ ಅಲಿ ಖಾಲೀದ್‌ ಅವರಿಗೆ ಸಿಬಿಐ ಅಧಿಕಾರಿಗಳು ಮತ್ತು ಕೋರ್ಟ್‌ ವಿಚಾರಣೆ ಮಾಡುವ ಡಿಜಿಟಲ್‌ ಆರೆಸ್ಟ್‌ ಹೆಸರಿನಲ್ಲಿ ₹96 ಲಕ್ಷ ವಂಚನೆ ಮಾಡಲಾಗಿದೆ.

ಮೋಹಿತ್‌ ಹಂಡಾ, ಸಮಾಧಾನ ಪವಾರ್‌, ಸಂದೀಪ್‌ ರಾವ, ರಾಹುಲ ಗುಪ್ತಾ, ರಾಜೀವ್‌ ಸಿನ್ಹಾ ಹಾಗೂ ಒಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಮಹೆಮೂದ್‌ ಅವರು ಶುಕ್ರವಾರ ನೀಡಿದ ದೂರಿನನ್ವಯ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಹೆಮೂದ್‌ ಅಲಿ ಖಾಲೀದ್‌ ಅವರು ಆರ್‌ಡಿಪಿಆರ್‌ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ನಿವೃತ್ತಿ ಹೊಂದಿದ್ದಾರೆ. 

ADVERTISEMENT

‘ನ.23ರಂದು ಮಹೆಮೂದ್‌ ಅಲಿ ಖಾಲೀದ್‌ ಅವರಿಗೆ ಟೆಲಿಕಾಂ ರೆಗುಲೆಟರಿ ಅಥಾರಿಟಿ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ಕರೆ ಮಾಡಿದ ರಾಜೀವ್‌ ಸಿನ್ಹಾ, ‘ನಿಮ್ಮ ಹೆಸರಿನಲ್ಲಿರುವ ಮೊಬೈಲ್‌ ಸಂಖ್ಯೆ ಕಾನೂನು ಬಾಹಿರ ಕೆಲಸಗಳಲ್ಲಿ ಬಳಕೆಯಾಗಿದೆ. ದೆಹಲಿ ಸೈಬರ್‌ ಬ್ರ್ಯಾಂಚ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಹೆದರಿಸಿದ್ದಾನೆ. ಬಳಿಕ ಸಿಬಿಐ ಅಧಿಕಾರಿಗಳೆಂದು ಮೋಹಿತ್‌ ಹಂಡಾ ಮತ್ತು ಸಮಾಧಾನ ಪವಾರ್‌ ಎನ್ನುವವರು ವಿಡಿಯೊ ಕರೆ ಮಾಡಿ, ದೆಹಲಿಯಲ್ಲಿ ನಿಮ್ಮ ಹೆಸರಿನಲ್ಲಿ ಕೆನರಾ ಬ್ಯಾಂಕ್‌ ಖಾತೆ ಇದ್ದು, ಅದು ನರೇಶ ಗೋಯಲ್‌ ಅವರ ಮನಿ ಲಾಂಡ್ರಿಂಗ್‌ ಕೇಸ್‌ನಲ್ಲಿ ಭಾಗಿಯಾಗಿದೆ ಎಂದು ಹೆದರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಂತರ ಮಹೆಮೂದ್‌ ಅವರ ನಾಲ್ಕು ಬ್ಯಾಂಕ್‌ ಖಾತೆಗಳಲ್ಲಿ ₹64.62 ಲಕ್ಷ ಇರುವುದನ್ನು ತಿಳಿದುಕೊಂಡ ವಂಚಕರು, ಸುಪ್ರೀಂ ಕೋರ್ಟ್‌ ವಿಚಾರಣೆ ಹೆಸರಿನಲ್ಲಿ ನ್ಯಾಯಾಧೀಶರೊಬ್ಬರನ್ನು ವಿಡಿಯೊ ಕರೆಯಲ್ಲಿ ತೋರಿಸಿದ್ದಾರೆ. ಹಣದ ಮೂಲ ಪರಿಶೀಲನೆ ಎಂದು ಮೂರು ಖಾತೆಯಲ್ಲಿನ ₹61 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು, ಸಿಬಿಐ ಎಎಸ್‌ಪಿ ಹೆಸರಿನಲ್ಲಿ ಕರೆ ಮಾಡಿದ್ದಾರೆ. ಮಹೆಮೂದ್ ಅವರ ಮನೆಯಲ್ಲಿನ 250 ಗ್ರಾಂ. ಮತ್ತು ಆಸ್ತಿಪತ್ರ ಅಡ ಇಡಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಡಿ.8ರವರೆಗೆ ಒಟ್ಟು ₹96 ಲಕ್ಷ ವಂಚನೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.