ADVERTISEMENT

ಸಂಭ್ರಮದ ರೇವಣಸಿದ್ಧೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 10:38 IST
Last Updated 8 ಮಾರ್ಚ್ 2020, 10:38 IST
ಕಾಳಗಿ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ ಗುಡ್ಡದಲ್ಲಿ ಶನಿವಾರ ಸಂಜೆ ರೇವಣಸಿದ್ದೇಶ್ವರ ರಥೋತ್ಸವ ಅದ್ಧೂರಿಯಾಗಿ ಜರುಗಿತು
ಕಾಳಗಿ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ ಗುಡ್ಡದಲ್ಲಿ ಶನಿವಾರ ಸಂಜೆ ರೇವಣಸಿದ್ದೇಶ್ವರ ರಥೋತ್ಸವ ಅದ್ಧೂರಿಯಾಗಿ ಜರುಗಿತು   

ಕಾಳಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇವಸ್ಥಾನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡದಲ್ಲಿ ಶನಿವಾರ ಸಂಜೆ ರೇವಣಸಿದ್ದೇಶ್ವರ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಪ್ರತಿ ವರ್ಷದಂತೆ ಈ ಬಾರಿಯೂ ರೇಣುಕಾಚಾರ್ಯರ ಜಯಂತಿಯಂದು ಭಕ್ತರು ತೇರು ಎಳೆದು ಕೃತಾರ್ಥರಾದರು. ಹೂಹಾರಗಳಿಂದ ಸಿಂಗರಿಸಿದ ರಥಕ್ಕೆ ಪೂಜೆ ಸಲ್ಲಿಸಿ, ತೆಂಗು ಒಡೆದು, ಕಳಸಾರೋಹಣ ಮಾಡಿ ಪುರವಂತರ ಕುಣಿತ ಮುಗಿಯುತ್ತಿದ್ದಂತೆ ಭಕ್ತರಿಂದ ಜೈ ಘೋಷ ಕೇಳಿಬಂದವು. ಗುಡ್ಡದಲ್ಲಿ ಸೇರಿದ್ದ ಅಪಾರ ಭಕ್ತರು ತೇರಿನ ಮೇಲೆ ಖಾರೀಕ್‌ ನಾರು, ಬಾಳೆಹಣ್ಣು ತೂರಿದರು.

ಇದಕ್ಕೂ ಮುಂಚೆ ಬೆಳಿಗ್ಗೆ ರೇವಣಸಿದ್ದೇಶ್ವರರ ಗದ್ದುಗೆಗೆ ಸುತ್ತಲಿನ ಏಳೂರು ಭಕ್ತರಿಂದ ವಿಶೇಷ ಪೂಜೆ, ನಂತರದಲ್ಲಿ ವಟುಗಳ ಅಯ್ಯಾಚಾರ, ಬಳಿಕ ತೊಟ್ಟಿಲು ಕಾರ್ಯಕ್ರಮ ಜರುಗಿತು. ಆ ಬಳಿಕ ಹಲಗೆ, ಡೊಳ್ಳು, ಭಾಜಾ-ಭಜಂತ್ರಿ ವಾದ್ಯ-ಮೇಳದ ಝೇಂಕಾರದೊಂದಿಗೆ ಭೆಡಸೂರ, ಅರಣಕಲ್ ಗ್ರಾಮದಿಂದ ನಂದಿಕೋಲು, ಸುಭಾಷ ದೇವರಮನಿಯಿಂದ ಕುಂಭ ಹಾಗೂ ಗುಡಿಯಿಂದ ಕಳಸದ ಭವ್ಯ ಮೆರವಣಿಗೆ ಆಗಮಿಸಿ ರಥೋತ್ಸವಕ್ಕೆ ಚಾಲನೆ ದೊರಕಿತು.

ADVERTISEMENT

ಹೊನ್ನಕಿರಣಗಿ ಮಠದ ಚಂದ್ರಗುಂಡ ಶಿವಾಚಾರ್ಯರು, ಸುಗೂರ ಮಠದ ಚನ್ನರುದ್ರಮುನಿ ಶಿವಾಚಾರ್ಯರು, ಚಂದನಕೇರಾ ಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಕೋಡ್ಲಿಯ ಬಸವಲಿಂಗ ಶಿವಾಚಾರ್ಯರು, ಗೌರಿ ಗಣೇಶ ಗುಡ್ಡದ ಸಿದ್ದ ಶಿವಯೋಗಿ ಶರಣರು, ಸಂಸ್ಥಾನಿಕ ಚನ್ನಬಸಪ್ಪ ದೇವರಮನಿ, ದೇವಸ್ಥಾನ ಸಮಿತಿ ಆಡಳಿತಾಧಿಕಾರಿ ಹಾಗೂ ಸೇಡಂ ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ಶಾಸಕ ಅವಿನಾಶ ಜಾಧವ, ಜಿ.ಪಂ ಸದಸ್ಯ ರಾಜೇಶ ಗುತ್ತೇದಾರ, ತಾಲ್ಲೂಕು ಪಂಚಾಯಿತಿ ರಾಮು ರಾಠೋಡ, ದತ್ತಾತ್ರೇಯ ಕುಲಕರ್ಣಿ, ಕಾರ್ಯದರ್ಶಿ ಮಂಜುನಾಥ ನಾವಿ, ಶಿವರಾಜ ಪಾಟೀಲ ಗೊಣಗಿ, ರಾಯಗೋಳ, ಮೊಗಲಪ್ಪ ಚಿದ್ರಿ ಪಾಲ್ಗೊಂಡಿದ್ದರು.

ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಾಳಗಿ ಸಿಪಿಐ ಭೋಜರಾಜ ರಾಠೋಡ, ಪಿಎಸ್ಐ ಬಸವರಾಜ ಚಿತ್ತಕೋಟೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.