ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಶಹಾಬಾದ್ ಕ್ರಾಸ್– ಸೋಮನಾಥಹಳ್ಳಿ ಕ್ರಾಸ್ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಬೈಕ್ಗಳಮುಖಾಮುಖಿ ಡಿಕ್ಕಿಯಲ್ಲಿ ಮೂವರು ಯುವಕರು ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ನಯೀಮ್ ಖಯೂಮ್ ಬಾಗವಾನ್ (16) ಮತ್ತು ಖ್ವಾಜಾ ಹುಸೇನ್ ಮೊಯಿನುದ್ದೀನ್ ಸಾಬ್ ಖಾನಾಪುರ (18) ಸ್ಥಳದಲ್ಲೇ ಮೃತಪಟ್ಟರೆ, ಮುದಸ್ಸೀರ್ ಮೆಹಮೂದ್ಸಾಬ್ ಖುರೇಷಿ (11) ಎಂಬ ಬಾಲಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ. ಮಿಸ್ಬಾ, ಸೋಹೈಲ್, ಒಮರ್ ಹಾಗೂ ಝಾಕೀರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖ್ವಾಜಾ ಹುಸೇನ್ ಹಾಗೂ ಮುದಾಸಿರ್ ಜೇವರ್ಗಿ ಪಟ್ಟಣದ ನಿವಾಸಿಗಳು. ನಯೀಮ್ ತೆಲಂಗಾಣದ ತಾಂಡೂರು ನಿವಾಸಿ. ಜೇವರ್ಗಿಯಲ್ಲಿರುವ ಸೋದರ ಮಾವನನ್ನು ಭೇಟಿಯಾಗಲು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಗೆ ಪೆಟ್ಟು: ಮೃತಪಟ್ಟ ಮೂವರ ಯುವಕರ ತಲೆಗೇ ಪೆಟ್ಟಾಗಿದ್ದು, ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಬುಧವಾರವಷ್ಟೇ ಈದ್ ಉಲ್ ಫಿತ್ರ್ ಹಬ್ಬ ಆಚರಿಸಿದ್ದ ಯುವಕರು, ಗುರುವಾರ ಜೇವರ್ಗಿ–ಕಲಬುರ್ಗಿ ಮುಖ್ಯರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದರು. ಆದರೆ, ವಿಧಿ ಅಪಘಾತದ ರೂಪದಲ್ಲಿ ಎದುರಾಗಿದ್ದು, ಹಬ್ಬದ ಖುಷಿಯಲ್ಲಿದ್ದ ಯುವಕರ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.