ಜೇವರ್ಗಿ: ಜನಪ್ರತಿನಿಧಿಗಳು ತಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರಗೊಂಡ ಬಡಾವಣೆಯ ನಿವಾಸಿಗಳು ತಮ್ಮಲ್ಲಿಯೇ ವಂತಿಗೆಯನ್ನು ಸಂಗ್ರಹಿಸಿ, ಟಿಪ್ಪರ್, ಜೆಸಿಬಿ ಯಂತ್ರ, ರೂಲರ್ ಸಹಾಯದೊಂದಿಗೆ ಬಡಾವಣೆಯಲ್ಲಿ ಕಚ್ಚಾ ರಸ್ತೆಯನ್ನು ನಿರ್ಮಾಣಕ್ಕೆ ಮುಂದಾಗಿದ್ದಾರೆ.
ರಸ್ತೆ, ಚರಂಡಿ, ಬೀದಿ ದೀಪ, ಶೌಚಾಲಯ ಸೇರಿದಂತೆ ಮೂಲಸೌಕರ್ಯಕ್ಕಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದರೂ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಬ್ದಾರಿತನದಿಂದ ನಗರ ಪ್ರದೇಶದ ಜನ ಮಳೆಗಾಲದಲ್ಲಿ ಪಾದರಕ್ಷೆ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಕೆಲವರು ಮೂಲಸೌಕರ್ಯಕ್ಕಾಗಿ ಸರ್ಕಾರವನ್ನು ದೂಷಿಸಿದರೆ, ಇನ್ನುಕೆಲವರು ಅಧಿಕಾರಿಗಳಿಗೆ, ಶಾಸಕರಿಗೆ ಹಿಡಿಶಾಪ ಹಾಕಿ ಮನವಿ ಸಲ್ಲಿಸಿ ಸುಮ್ಮನಾಗುತ್ತಾರೆ. ಆದರೆ, ಪಟ್ಟಣದ ದತ್ತನಗರ ಬಡಾವಣೆಯ 2ನೇ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ಹತ್ತಿರದ ನಿವಾಸಿಗಳು ಒಂದೆಜ್ಜೆ ಮುಂದೆ ಹೋಗಿ ಸ್ವತಃ ತಾವೆ ಹಣ ಕೂಡಿಸಿ ಸ್ವಂತ ಶ್ರಮದಾನದ ಮೂಲಕ 300 ಮೀಟರ್ ರಸ್ತೆ ನಿರ್ಮಾಣ ಮಾಡುವ ಮೂಲಕ ಆಡಳಿತ ವರ್ಗಕ್ಕೆ ಸವಾಲೆಸೆದಿದ್ದಾರೆ.
‘ಪಟ್ಟಣದ ದತ್ತನಗರ ಬಡಾವಣೆ 1,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಮುಖ್ಯ ರಸ್ತೆ ಹೊರತುಪಡಿಸಿ ಬಡಾವಣೆಯ ಒಳ ರಸ್ತೆಗಳ ಮೇಲೆ ಹಿಡಿ ಮಣ್ಣು ಹಾಕುವ ಕೆಲಸ ಈವರೆಗೆ ಮಾಡಿಲ್ಲ. ಮಳೆಗಾಲದಲ್ಲಿ ಕೆಸರಿನ ರಸ್ತೆಯಿಂದ ಯಾರದೋ ಮನೆ ಮುಂದೆ ಬೈಕ್, ಕಾರು ನಿಲ್ಲಿಸಿ, ಕೈಯಲ್ಲಿ ಪಾದರಕ್ಷೆ ಹಿಡಿದುಕೊಂಡು ಮನೆ ತಲುಪುವ ಅನಿವಾರ್ಯತೆ ಎದುರಾಗಿದೆ. ಚರಂಡಿ ನೀರು ಖಾಲಿ ನಿವೇಶನ ಹಾಗೂ ರಸ್ತೆ ಮೇಲೆ ನಿಲ್ಲುತ್ತದೆ. ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳಿಲ್ಲ. ಇದರಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ’ ಎನ್ನುತ್ತಾರೆ ಸ್ಥಳಿಯರು.
ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ಪುರಸಭೆ ಸದಸ್ಯರಿಂದ ಹಿಡಿದು ಶಾಸಕರ ವರೆಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಡಾವಣೆಯ ಜನರು ತಮ್ಮಲ್ಲಿಯೇ ವಂತಿಗೆ ಸಂಗ್ರಹಿಸಿ, 7 ದೊಡ್ಡ ಟಿಪ್ಪರ್ ಮುರುಮ್, ಜೆಸಿಬಿ ಯಂತ್ರ, ರೂಲರ್ಗಳ ಸಹಾಯದಿಂದ ಮುರುಮ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಮಳೆಗಾಲದಲ್ಲಿ ಕಾರು, ದ್ವಿಚಕ್ರ ವಾಹನ ಸರಾಗವಾಗಿ ಹೋಗುವಂತೆ ರಸ್ತೆ ನಿರ್ಮಾಣ ಮಾಡಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಕೆಲಸ ಮಾಡುತ್ತಿಲ್ಲ ಎಂದು ಕೈ ಚೆಲ್ಲಿ ಕೂಡದೆ ಬಡಾವಣೆಯ ಜನರು ತಾವೆ ರಸ್ತೆ ನಿರ್ಮಾಣ ಮಾಡಿದ್ದು, ಈಗ ಅನೇಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.