ADVERTISEMENT

ಅಪಘಾತಕ್ಕೆ ಆಹ್ವಾನಿಸುವ ಹೆದ್ದಾರಿ

ಸಂಪೂರ್ಣ ಹದಗೆಟ್ಟ ಕರಜಗಿ – ಮಣೂರ ನಡುವಿನ 14 ಕಿ.ಮೀ ರಸ್ತೆ

ಶಿವಾನಂದ ಹಸರಗುಂಡಗಿ
Published 21 ಜನವರಿ 2021, 2:47 IST
Last Updated 21 ಜನವರಿ 2021, 2:47 IST
ಅಫಜಲಪುರ ತಾಲ್ಲೂಕಿನ ಕರಜಗಿ – ಮಣೂರ ನಡುವಿನ 14 ಕಿ.ಮೀ ರಸ್ತೆ ಹಾಳಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ
ಅಫಜಲಪುರ ತಾಲ್ಲೂಕಿನ ಕರಜಗಿ – ಮಣೂರ ನಡುವಿನ 14 ಕಿ.ಮೀ ರಸ್ತೆ ಹಾಳಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ   

ಅಫಜಲಪುರ: ಕಲಬುರ್ಗಿಯಿಂದ ಮಣೂರವರೆಗೆ ಸುಮಾರು 90 ಕಿ.ಮೀ ರಸ್ತೆಯನ್ನು 10 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಕರಜಗಿ – ಮಣೂರ ನಡುವಿನ 14 ಕಿ.ಮೀ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು, ರಸ್ತೆಯ ಮೇಲೆ ಗೆರೆಗಳು ಮೂಡಿದ್ದು, ಅಪಘಾತಕ್ಕೆ ಅಹ್ವಾನ ನೀಡುವಂತಾಗಿದೆ.

ಅಫಜಲಪುರದಿಂದ ಮಣೂರಿನವರೆಗೆ ಸುಮಾರು ₹ 20 ಕೋಟಿ ವೆಚ್ಚದಲ್ಲಿ ಸುಮಾರು 36 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಇದು ರಾಜ್ಯದ ರಸ್ತೆಯಾಗಿದ್ದು, ರಸ್ತೆಯ ತುಂಬಾ ದಪ್ಪ, ದಪ್ಪವಾದ ಗೆರೆಗಳು ನಿರ್ಮಾಣವಾಗಿವೆ. ದ್ವಿಚಕ್ರ ವಾಹನ ಸಂಚರಿಸುವಾಗ ವಾಹನ ನಿಯಂತ್ರಣ ತಪ್ಪುತ್ತಿವೆ. ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ನಡೆಸುವುದು ದೊಡ್ಡ ಸಮಸ್ಯೆಯಾಗಿದೆ. ದ್ವಿಚಕ್ರ ವಾಹನದ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನ ನಡೆಸುವಂತಾಗಿದೆ. ಸಂಬಂಧಪಟ್ಟ ರಾಜ್ಯ ಹೆದ್ದಾರಿ ಪ್ರಾಧಿಕಾರದವರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಯನ್ನು ಸರಿಪಡಿಸಬೇಕೆಂದು ಕರಜಗಿ ಜಿ.ಪಂ ಸದಸ್ಯರಾದ ಭೌರಮ್ಮ ಮಹಾದೇವ ಕರೂಟಿ ಹಾಗೂ ಮಾಜಿ ಸದಸ್ಯರಾದ ಮಣೂರ ಪಟೇಲ
ಒತ್ತಾಯಿಸಿದರು.

ಕಲಬುರ್ಗಿಯಿಂದ ಅಫಜಲಪುರದವರೆಗೆ ಸುಮಾರು 55 ಕಿ.ಮೀ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಆ ರಸ್ತೆಯ ತುಂಬಾ ದಪ್ಪ, ದಪ್ಪ ಗೆರೆಗಳು ಸೃಷ್ಟಿಯಾಗಿದ್ದು, ವಾಹನ ನಡೆಸುವದು ಕಷ್ಟಕರವಾಗಿದೆ. ಎದುರಿಗೆ ಬರುವ ವಾಹನಕ್ಕೆ ಅಥವಾ ಹಿಂದೆ ಬರುವ ವಾಹನಕ್ಕೆ ವಾಹನಗಳಿಗೆ ದಾರಿ ಬಿಡಲು ಸಾಧ್ಯವಾಗುತ್ತಿಲ್ಲ. ಕಾರಣ ವಾಹನಗಳಿಗೆ ದಾರಿ ಬಿಡುವಾಗ ಅಪಘಾತವಾಗುವ ಸಂಭವ ಜಾಸ್ತಿಯಾಗಿದೆ. ಹೀಗಾಗಿ ರಸ್ತೆಯ ಮೇಲೆ ಸಂಚಾರ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಜಿ.ಪಂಮಾಜಿ ಸದಸ್ಯರಾದ ಸಿದ್ಧಾರ್ಥ ಬಸರಿಗಿಡದ ಹಾಗೂ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭೀಮಾಶಂಕರ ಹೊನಕೇರಿ ಒತ್ತಾಯಿಸಿದ್ದಾರೆ.

ADVERTISEMENT

ರಸ್ತೆ ನಿರ್ಮಾಣಕ್ಕೆ ಕೋಟಿ ಕೋಟಿ ಖರ್ಚಾದರೂ ಗುಣಮಟ್ಟದ ರಸ್ತೆ ಆಗದ ಕಾರಣ ಅಲ್ಲಲ್ಲಿ ರಸ್ತೆ ಹಾಳಾಗುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ ಹಲವಾರು ವರ್ಷಗಳಿಂದ ಹಲವಾರು ಸಂಘಟನೆಗಳು ಧರಣಿ, ಸತ್ಯಾಗ್ರಹ, ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಮಾಡಿದ ಮೇಲೆ ಸರ್ಕಾರ ಮಣಿದು ಅನುದಾನ ನೀಡಿ ರಸ್ತೆ ನಿರ್ಮಾಣ ಮಾಡಿದೆ. ಆದರೆ ಗುತ್ತಿಗೆದಾರರ, ಇಲಾಖೆ ಅಧಿಕಾರಿಗಳ, ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆ ಹಾಳಾಗಿ ಹೋಗಿದೆ ಎಂದು ಸಾರ್ವಜನಿಕರು ನಿತ್ಯ ಆಡಿಕೊಳ್ಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.