ADVERTISEMENT

ಸೋಲಾರ್ ಪ್ಲೇಟ್, ಬ್ಯಾಟರಿ ಕಳವು: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:17 IST
Last Updated 25 ನವೆಂಬರ್ 2021, 2:17 IST
ಚಿಂಚೋಳಿ ತಾಲ್ಲೂಕು ಸುಲೇಪೇಟ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ ಕಳ್ಳತನ ಮಾಡಿದ ವಸ್ತುಗಳನ್ನು ಜಪ್ತಿ ಮಾಡಿರುವುದು
ಚಿಂಚೋಳಿ ತಾಲ್ಲೂಕು ಸುಲೇಪೇಟ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ ಕಳ್ಳತನ ಮಾಡಿದ ವಸ್ತುಗಳನ್ನು ಜಪ್ತಿ ಮಾಡಿರುವುದು   

ಚಿಂಚೋಳಿ: ಹೊಲದಲ್ಲಿ ತಂತಿಬೇಲಿಗೆ ವಿದ್ಯುತ್ ಪ್ರವಹಿಸಲು ರೈತರು ಅಳವಡಿಸಿಕೊಂಡಿದ್ದ ಸೋಲಾರ್ ಪ್ಲೇಟ್, ಬ್ಯಾಟರಿ ಮತ್ತು ಸ್ಟೆಬಲೈಸರ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಸುಲೇಪೇಟ ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ಕೊರವಿ ಗಾಂಧಿನಗರ ತಾಂಡಾದ ಮಿಥುನ ಚವ್ಹಾಣ ಮತ್ತು ಸುನೀಲ ಜಾಧವ್ ಅವರನ್ನು ಬಂಧಿಸಲಾಗಿದೆ. ₹ 2 ಲಕ್ಷ ಮೌಲ್ಯದ ವಸ್ತುಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಹೊಡೇಬೀರನಹಳ್ಳಿ, ಕೊರವಿ, ಕುಡಳ್ಳಿ ಗ್ರಾಮ ರೈತರ ಹೊಲಗಳಲ್ಲಿ ಮತ್ತು ಸವಳು ಮಣ್ಣಿನ ಕೈಗಾರಿಕೆಗಳಲ್ಲಿ ಕಳವು ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಸಿಪಿಐ ಕೆ.ಜಿ.ಜಗದೀಶ ತಿಳಿಸಿದರು.

ತಾಲ್ಲೂಕಿನ ಹೊಡೇಬೀರನಹಳ್ಳಿ ಗ್ರಾಮದ ಹಬೀಬ ಪಟೇಲ್ ಅವರ ಹೊಲದ ಕಬ್ಬು ಬೆಳೆಗೆ ದನ, ಕರುಗಳು ಮತ್ತು ವನ್ಯಜೀವಿಗಳಿಂದ ತೊಂದರೆ ಆಗದಂತೆ ಕಾಪಾಡಲು ಸೋಲಾರ್ ತಂತಿ ಬೇಲಿ ಅಳವಡಿಸಲಾಗಿತ್ತು. ನ.18ರಂದು ರಾತ್ರಿ ಕಳ್ಳತನ ನಡೆದಿತ್ತು. ನ.23ರಂದು ಹೊಲದ ಮಾಲೀಕ ಸುಲೇಪೇಟ ಪೊಲೀಸ ಠಾಣೆಗೆ ದೂರು ಸಲ್ಲಿಸಿದ್ದರು.

ADVERTISEMENT

ಸಬ್ ಇನ್‌ಸ್ಪೆಕ್ಟರ್ ಸುಖಾನಂದ ಸಿಂಗೆ, ಉದ್ದಂಡಪ್ಪ ಹಾಗೂ ಸುಲೇಪೇಟ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.