
ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ನಡೆದ ಆರ್ ಎಸ್ ಎಸ್ ಗಣವೇಷಧಾರಿಗಳ ಪಥ ಸಂಚಲನದ ನೋಟ
ಚಿತ್ತಾಪುರ: ಕಳೆದೊಂದು ಒಂದು ತಿಂಗಳಿನಿಂದ ತೀವ್ರ ಗಮನ ಸೆಳೆದಿದ್ದ ಮತ್ತು ಚರ್ಚೆಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನವು ಭಾನುವಾರ ಪೊಲೀಸ್ ಬಿಗಿ ಭದ್ರತೆಯ ನಡುವೆ ಶಾಂತಿಯುತವಾಗಿ ಸಂಪನ್ನಗೊಂಡಿತು.
ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರ ಪಟ್ಟಣದಲ್ಲಿ ಆರ್ಎಸ್ಎಸ್ ಗಣವೇಷಧಾರಿಗಳು ಪೊಲೀಸರ ಸರ್ಪಗಾವಲಿನ ನಡುವೆ ತನ್ನ 'ಸಂಘದ ಬಲ' ಪ್ರದರ್ಶಿಸಿದರು.
ಪಥಸಂಚಲನಕ್ಕೆ ಜಿಲ್ಲಾಡಳಿತ ನೀಡಿದ್ದ ಷರತ್ತುಬದ್ಧ ಅನುಮತಿಯಂತೆ 300 ಗಣವೇಷಧಾರಿಗಳು ಹಾಗೂ 50 ಘೋಷ್ ವಾದಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಆರ್ ಎಸ್ ಎಸ್ ಪಥ ಸಂಚಲನ ವೀಕ್ಷಿಸಲು ಚಿತ್ತಾಪುರದ ರಸ್ತೆಗಳ ಇಕ್ಕೆಲಗಳಲ್ಲಿ ಜನತೆ ಕಿಕ್ಕಿರಿದು ಸೇರಿದ್ದರು. ಮಹಿಳೆಯರು ಸೇರಿದಂತೆ ಹಲವರು ಗಣವೇಷಧಾರಿಗಳ ಮೇಲೆ ಪುಷ್ಪದಳಗಳನ್ನು ಎರಚಿ ಗೌರವ ಅರ್ಪಿಸಿದರು.
ನೆರೆದಿದ್ದ ನೂರಾರು ಮಂದಿ 'ಭಾರತ ಮಾತಾಕೀ ಜೈ', 'ವಂದೇ ಮಾತರಂ' 'ಜೈ ಶ್ರೀರಾಮ', 'ಜೈ ಭವಾನಿ, ಜೈ ಶಿವಾಜಿ' ಎಂದು ಘೋಷಣೆ ಮೊಳಗಿಸಿದರು.
ನಿಗದಿತ ಪಟ್ಟಿದ್ದವರನ್ನು ಬಿಟ್ಟು ಗಣವೇಷ ಧರಿಸಿ ಬಂದಿದ್ದ ಇತರರನ್ನು ಪಥಸಂಚಲನದಲ್ಲಿ ಪಾಲ್ಗೊಳ್ಳದಂತೆ ಪೊಲೀಸರು ತಡೆದರು. ಮಾತ್ರವಲ್ಲ ಘೋಷಣೆ ಮೊಳಗಿಸುತ್ತಿದ್ದ ಯುವಕರನ್ನು ಪೊಲೀಸರು ತಡೆದು ಪಥಸಂಚಲನದ ಹಿಂದೆ ಬರುವಂತೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.