
ಸೇಡಂ (ಕಲಬುರಗಿ ಜಿಲ್ಲೆ): ಸೇಡಂನಲ್ಲಿ ಆರ್ಎಸ್ಎಸ್ ಶತಾಬ್ದಿ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಗಣವೇಷಧಾರಿಗಳ ಪಥಸಂಚಲನ ಭಾನುವಾರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾ
ಯಿತು. ಪೊಲೀಸರ ತಡೆಯ ನಡುವೆಯೂ ಆಕರ್ಷಕ ಪಥಸಂಚಲನ ಜರುಗಿತು.
ಪಥಸಂಚಲನಕ್ಕೆ ಮಧ್ಯಾಹ್ನ 1 ಗಂಟೆಗೆ ನೂರಾರು ಗಣವೇಷಧಾರಿಗಳು ನರ್ಮದಾ ಕಾಲೇಜು ಆವರಣ
ದಲ್ಲಿ ಸೇರಿದ್ದರು. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಪಥಸಂಚಲನ ಆರಂಭವಾಯಿತು. ಡಿಬಿಆರ್ ಕಾಂಪೌಂಡ್ ಮೂಲಕ ಮುಖ್ಯರಸ್ತೆಗೆ ಬಂದಂತೆ ಪೊಲೀಸರು ಗಣವೇಷಧಾರಿಗಳಿಗೆ ತಡೆಯೊಡ್ಡಿದರು.
ಭಾನುವಾರ ಪಥಸಂಚಲನ ನಡೆಸಲು ಅವಕಾಶ ನೀಡುವಂತೆ ಆರ್ ಎಸ್ಎಸ್ನಿಂದ ಶನಿವಾರ ರಾತ್ರಿ ಮನವಿ ಸಲ್ಲಿಕೆಯಾಗಿತ್ತು. ಪಥ ಸಂಚಲನದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣ ನೀಡಿ ಸೇಡಂ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರು ಅನುಮತಿ ನಿರಾಕರಿಸಿದರು.
‘ಪರವಾನಗಿ’ ಇಲ್ಲದ ಕಾರಣಕ್ಕೆ ಗಣವೇಷಧಾರಿಗಳನ್ನು ವಶಕ್ಕೆ ಪಡೆದು ನಾಲ್ಕೈದು ಬಸ್ಗಳನ್ನು ಹತ್ತಿಸಿದರು. ಇದನ್ನು ಸಾರ್ವಜನಿಕರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ವಾಗ್ವಾದ–ನೂಕು ನುಗ್ಗಲು ಉಂಟಾಯಿತು.
‘ಘೋಷ್’ ವಾದ್ಯ ತಂಡದವರನ್ನು ಪೊಲೀಸರು ವಶಕ್ಕೆ ಪಡೆದು ಬಸ್ ಏರಿಸಿದರು. ಬಸ್ನಲ್ಲೇ ‘ವಾದ್ಯ ನುಡಿಸಿ’ ಆಕ್ರೋಶ ವ್ಯಕ್ತಪಡಿಸಿದರು. ‘ಭಾರತ ಮಾತಾಕಿ ಜೈ’ ಎಂದು ಜೈಕಾರ ಮೊಳಗಿಸಿದರು.
ಕೆಲ ಹೊತ್ತಿನ ಬಳಿಕ ವಶಕ್ಕೆ ಪಡೆದಿದ್ದ ಗಣವೇಷಧಾರಿಗಳನ್ನು ಪೊಲೀಸರು ಬಸ್ ನಿಲ್ದಾಣ, ತಾಲ್ಲೂಕು ಪಂಚಾಯಿತಿ ಸೇರಿದಂತೆ ವಿವಿಧೆಡೆ ಬಿಡುಗಡೆ ಮಾಡಿದರು. ನಂತರ ಪುನಃ ಗಣವೇಷಧಾರಿಗಳು ಅಲ್ಲಿಂದಲೇ ತಮ್ಮ ಪಥಸಂಚಲನ ಪ್ರಾರಂಭಿಸಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹೆಜ್ಜೆಹಾಕಿದರು.
ಪಥ ಸಂಚಲನ ಬಂದಂತೆ ಜನರು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದರು. ಗಣವೇಷಧಾರಿಗಳು ಬಹುತೇಕ ನಿಗದಿತ ಮಾರ್ಗದಲ್ಲೇ ನಿಗದಿಯಂತೆ ಸಾಗಿ ನರ್ಮದಾ ಕಾಲೇಜು ಬಳಿ ಸಂಪನ್ನಗೊಂಡಿತು.
ಶಿವಮೊಗ್ಗ: ತಾಲ್ಲೂಕಿನ ಹಸೂಡಿ ಗ್ರಾಮ ಹಾಗೂ ಭದ್ರಾವತಿ ತಾಲ್ಲೂಕಿನ ಹೊಳೆ ಹೊನ್ನೂರು ಪಟ್ಟಣದಲ್ಲಿ ಭಾನುವಾರ ಆರ್ಎಸ್ಎಸ್ ಪಥ ಸಂಚಲನ ನಡೆಯಿತು.ಬಿಜೆಪಿಯ ವಿಭಾಗೀಯ ಮಾಜಿ ಪ್ರಭಾರಿ ಹಾಗೂ ಭದ್ರಾ ಕಾಡಾ ಮಾಜಿ ಅಧ್ಯಕ್ಷ ಗಿರೀಶ್ ಪಟೇಲ್ ಹೊಳೆಹೊನ್ನೂರಿನಲ್ಲಿ ನಡೆದ ಪಥ ಸಂಚಲನದ ನೇತೃತ್ವ ವಹಿಸಿದ್ದರು.
ಹಸೂಡಿಯಲ್ಲಿ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು.
ಹಸೂಡಿ, ಹೊಳೆಹೊನ್ನೂರಿನಲ್ಲಿ ಪಥ ಸಂಚಲನಕ್ಕೆ ಅನುಮತಿ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸವದತ್ತಿ ವರದಿ (ಬೆಳಗಾವಿ ಜಿಲ್ಲೆ): ನಗರದಲ್ಲಿ ಭಾನುವಾರ ಪೊಲೀಸ್ ಅನುಮತಿ ಪಡೆದು ಆರ್ಎಸ್ಎಸ್ ಪಥಸಂಚಲನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.