ಯಡ್ರಾಮಿ: ತಾಲ್ಲೂಕಿನ ಕುಮ್ಮನಸಿರಸಗಿ ಗ್ರಾಮದಲ್ಲಿ ಭಾನುವಾರ ಯಡ್ರಾಮಿ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ನಿಷೇಧಾಜ್ಞೆ ವಿಧಿಸಿದ್ದರಿಂದ ಆರ್ಎಸ್ಎಸ್ ಪಥಸಂಚಲನ ಸ್ಥಗಿತಗೊಂಡಿತು.
ಗ್ರಾಮದಲ್ಲಿ ಮಧ್ಯಾಹ್ನ 3ಕ್ಕೆ ಶರಣಬಸವೇಶ್ವರ ದೇವಸ್ಥಾನದಿಂದ ಪಥಸಂಚಲನ ನಡೆಸಲು ಆರ್ಎಸ್ಎಸ್ ಸಿದ್ಧತೆ ಮಾಡಿಕೊಂಡಿತ್ತು. ಶನಿವಾರವೇ ಸಂಘದ ಪ್ರಮುಖರು ಯಡ್ರಾಮಿ ಪೊಲೀಸ್ ಠಾಣೆಗೆ ಮಾಹಿತಿ ಸಲ್ಲಿಸಿ ರಾತ್ರಿ ಪಥಸಂಚಲನ ಹೊರಡುವ ಮಾರ್ಗದಲ್ಲಿ ಸ್ವಚ್ಛತೆ, ಅಲಂಕಾರ ಸೇರಿ ಭರ್ಜರಿ ತಯಾರಿ ನಡೆಸಿದ್ದರು. ತಡರಾತ್ರಿಯೇ ತಹಶೀಲ್ದಾರ್ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಹೊರಗಿನವರು ಗ್ರಾಮ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದರು.
‘ಗ್ರಾಮದಲ್ಲಿ ಅ.19ರಂದು ಆರ್ಎಸ್ಎಸ್ ಪಥಸಂಚಲನ ಜರುಗುವ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಸಂಘಟಕರ ಹಾಗೂ ದಲಿತ ಸಂಘಟನೆಗಳ ಮಧ್ಯ ವೈಷಮ್ಯ ಬೆಳೆದಿದ್ದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗಿ ಸಾರ್ವಜನಿಕ ಶಾಂತತೆ ಭಂಗ ಉಂಟಾಗುವ ಸಾಧ್ಯತೆ ಇದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರಾಮೀಣ ಡಿವೈಎಸ್ಪಿ ಲೋಕೇಶಪ್ಪ, ಜೇವರ್ಗಿ ಸಿಪಿಐ ರಾಜೇಸಾಬ್ ನದಾಫ, ಕಮಲಾಪುರ ಸಿಪಿಐ ಶಿವಶಂಕರ ಸಾಹು, ಜೇವರ್ಗಿ, ನೆಲೋಗಿ, ಮಹಾಗಾಂವ್, ಕಮಲಾಪುರ ಪಿಎಸ್ಐ, ಸಿಬ್ಬಂದಿ ಸೇರಿ 50ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಬಂದೋಬಸ್ತ್ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.