
ಕಲಬುರಗಿ: ಕಮಲಾಪುರ ತಾಲ್ಲೂಕಿನ ಹೊಳಕುಂದಾದ ರುಕ್ಮಿಣಿ-ಪಾಂಡುರಂಗ ಮಂದಿರದಲ್ಲಿ ಜ.30ರಂದು 10ನೇ ವರ್ಧಂತಿ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಂದಿರ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಅರ್ಚಕ ಬಲಭೀಮ ಕುಲಕರ್ಣಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 5.30ಕ್ಕೆ ರುಕ್ಮಿಣಿ ಪಾಂಡುರಂಗ ಶಿಲಾ ಮೂರ್ತಿಗಳಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ನೈವೇದ್ಯ ಸಮರ್ಪಣೆ ನಡೆಯಲಿದೆ. 8 ಗಂಟೆಗೆ ಗ್ರಾಮದ ರಾಘವೇಂದ್ರ ಕುಲಕರ್ಣಿ ಅವರ ಮನೆಯಿಂದ ಕುಂಭ ಕಳಸದೊಂದಿಗೆ ಮಂದಿರದವರೆಗೆ ತನಾರತಿ ಮೆರವಣಿಗೆ ನಡೆಯಲಿದೆ.
ಮಂದಿರಕ್ಕೆ ತನಾರತಿ ಬಂದ ಬಳಿಕ ಪಾಂಡುರಂಗ ದೇವರಿಗೆ ತುಳಸಿ ಅರ್ಚನೆ, ರುಕ್ಮಿಣಿ ದೇವಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಭಗವದ್ಗೀತೆಯ 9ನೇ ಅಧ್ಯಾಯದ ಸಾಮೂಹಿಕ ಪಾರಾಯಣ ನಡೆಯಲಿದೆ. ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ, ಸರಡಗಿ ಶಕ್ತಿಪೀಠದ ಅಪ್ಪಾರಾವ ದೇವಿ ಮುತ್ತ್ಯಾ, ಸೊಂತ ಶಂಕರಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಮಹಾಪ್ರಸಾದ ವಿತರಣೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.