ADVERTISEMENT

ಕಲಬುರಗಿ | ಸನಾತನ ಧರ್ಮದ ಸಂದೇಶವೇ ವಿಶ್ವಕ್ಕೆ ಶಾಂತಿ:

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 5:30 IST
Last Updated 8 ಫೆಬ್ರುವರಿ 2026, 5:30 IST
ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ವಿದ್ಯಾಭಾರತಿ ವತಿಯಿಂದ ಪೂರ್ವ ಛಾತ್ರ ಚ, ಪೂರ್ವ ಆಚಾರ್ಯ ಸಮಾವೇಶದಲ್ಲಿ ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು          ಪ್ರಜಾವಾಣಿ ಚಿತ್ರ
ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ವಿದ್ಯಾಭಾರತಿ ವತಿಯಿಂದ ಪೂರ್ವ ಛಾತ್ರ ಚ, ಪೂರ್ವ ಆಚಾರ್ಯ ಸಮಾವೇಶದಲ್ಲಿ ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು          ಪ್ರಜಾವಾಣಿ ಚಿತ್ರ    

ಕಲಬುರಗಿ: ‘ವಿವಿಧತೆಯಲ್ಲಿ ಏಕತಾ ಭಾವ ಮೂಡಿಸುವುದೇ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಗಳ ಮುಖ್ಯ ಧ್ಯೇಯ’ ಎಂದು ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯ ರೇಣುಕಾಚಾರ್ಯ ಪ್ರಣವಕುಟೀರ ಚಲಗೇರಾದ ಶಾಂತವೀರ ಶಿವಾಚಾರ್ಯರು ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ವಿದ್ಯಾಭಾರತಿ ಕಲಬುರಗಿ ಜಿಲ್ಲಾ ಸಂಲಗ್ನಿತ ಶಿಕ್ಷಣ ಸಂಸ್ಥೆಗಳ ಪೂರ್ವ ಛಾತ್ರ ಚ ಪೂರ್ವ ಆಚಾರ್ಯ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

‘ಭಾರತ ಪರಕೀಯರ ದಾಳಿಗೆ ಒ‌ಳಗಾದರೂ ಗಟ್ಟಿಯಾಗಿ ಉಳಿದಿದೆ. ಸನಾತನ ಧರ್ಮಗಳ ಸಂದೇಶವೇ ವಿಶ್ವಕ್ಕೆ ಶಾಂತಿ. ಮನುಕುಲದ ದಯೆಯೇ ವಿದ್ಯಾಭಾರತಿ ಸಂಸ್ಥೆಗಳ ಉದ್ದೇಶ. ಹೀಗಾಗಿ ಸನಾತನ ಧರ್ಮ ಬೆಳೆಸುವ ಕೆಲಸವಾಗಲಿ. ಮೆಕಾಲೆಯ ಶಿಕ್ಷಣ ಪದ್ಧತಿ ಬದಲಾಗಬೇಕು. ವಿದ್ಯಾಭಾರತಿ ವಿದ್ಯಾರ್ಥಿಗಳ ಆತ್ಮ. ಹೀಗಾಗಿ ಮನೆಬಾಗಿಲಿಗೆ ವಿದ್ಯಾಭಾರತಿಯ ಉದ್ದೇಶ ತಲುಪಲಿ’ ಎಂದು ಅವರು ಹಾರೈಸಿದರು.

ADVERTISEMENT

ಕೊಪ್ಪಳ ಜಿಲ್ಲೆ ಕಾರಟಗಿಯ ಕೆಂಬ್ರಿಡ್ಜ್‌ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಲೀಲಾ ಮಲ್ಲಿಕಾರ್ಜುನ ಕಾರಟಗಿ ಮಾತನಾಡಿ, ‘ಸಂವಿಧಾನಕ್ಕೆ ನಾಲ್ಕು ಅಂಗಗಳಿರುವಂತೆ ದೇಶಕ್ಕೆ ಭಕ್ತಿ, ಜ್ಞಾನ, ಕರ್ಮ, ವಿಜ್ಞಾನ ಎಂಬ ನಾಲ್ಕು ಅಂಗಗಳಿವೆ. ವಿದ್ಯಾರ್ಥಿಗಳು ಶಾಲೆಯೊಂದಿಗೆ ಆತ್ಮ ಸಂಬಂಧ ಹೊಂದಿರುತ್ತಾರೆ. ಮೊಬೈಲ್‌ ಎಂಬುದು ಮಾಂತ್ರಿಕ. ಮಕ್ಕಳ ಕೈಗೆ ಮೊಬೈಲ್‌ ಕೊಟ್ಟು ದೂರ ಮಾಡಿಕೊಳ್ಳಬೇಡಿ. ಮೌಲ್ಯಗಳ ಕೊರತೆಯಾದರೆ ದೇಶಕ್ಕೆ ನಷ್ಟ. ಹೀಗಾಗಿ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಶಿಕ್ಷಣದಿಂದ ಆಗಬೇಕು. ಶಿಕ್ಷಣವೆಂದರೆ ಕೇವಲ ಅಂಕಗಳಲ್ಲ, ಸಂಸ್ಕಾರ, ಮೌಲ್ಯ, ಆದರ್ಶ’ ಎಂದು ಹೇಳಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ, ನಿವೃತ್ತ ಬಿಇಒ ಸತ್ಯಕುಮಾರ ಬಾಗೋಡಿ, ‘ಪ್ರತಿ ಮಗುವಿಗೂ ಶಿಕ್ಷಣ ತಲುಪಲಿ, ಹಳ್ಳಿ ಹಳ್ಳಿಗಳಲ್ಲೂ ಶಾಲೆಗಳು ತೆರೆಯಲಿ ಎಂಬುದು ವಿದ್ಯಾಭಾರತಿಯ ಉದ್ದೇಶ. ವಿದ್ಯಾಭಾರತೀಯ ಒಂದು ಉದ್ದೇಶವೇ ಸರ್ಕಾರದ ಸರ್ವಶಿಕ್ಷಣ ಅಭಿಯಾನ. ಸರ್ಕಾರದ ಯೋಜನೆಗಳಲ್ಲಿ ವಿದ್ಯಾಭಾರತಿಯ ಪ್ರಕಲ್ಪನೆಗಳು ಇವೆ. ಉದ್ದೇಶಗಳ ಈಡೇರಿಕೆಗೆ ಎಲ್ಲರೂ ಕೈಜೋಡಿಸೋಣ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ‘ವಿದ್ಯಾನೇಹಿಗ’ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ವಿದ್ಯಾಭಾರತಿ ಬೆಳಗಾವಿಯ ಅಧ್ಯಕ್ಷ ಪರಮೇಶ್ವರ ಹೆಗಡೆ, ‘ಸಾಧಕರನ್ನು ಒಂದೆಡೆ ಸೇರಿಸುವ ಕೆಲಸ ಇದಾಗಿದೆ. ವಿದ್ಯಾರ್ಥಿಗಳಿಗೆ ಕಲಿಸಿದ ವಿದ್ಯಾಲಯದ ಬಗ್ಗೆ ಶ್ರದ್ಧೆ ಇರಬೇಕು. ಕಲ್ಯಾಣ ಕರ್ನಾಟಕ ರಾಷ್ಟ್ರಕೂಟರ ನಾಡು. ಹೀಗಾಗಿ ಆಳಿದ ಊಳಿದ ಭೂಮಿಯ ಬಗ್ಗೆ ಅಭಿಮಾನವಿರಲಿ. ಸಂಕುಚಿತ ದೃಷ್ಟಿಕೋನ ಬೇಡ. ರಾಷ್ಟ್ರೀಯ ಭಾವ ಜಾಗೃತಿಗೊಳಿಸುವ ಕಾರ್ಯವೇ ವಿದ್ಯಾಭಾರತಿಯ ಧ್ಯೇಯ’ ಎಂದು ಹೇಳಿದರು.

ಸ್ಮರಣ ಸಂಚಿಕೆಯ ಸಂಪಾದಕೀಯ ನುಡಿಗಳನ್ನಾಡಿದ ಗುರುಶಾಂತಯ್ಯ ಮಠಪತಿ, ‘ಸ್ಮರಣ ಸಂಚಿಕೆ 23 ಲೇಖನಗಳನ್ನು ಒಳಗೊಂಡಿದೆ. ಭಾರತೀಯ ಶಿಕ್ಷಣ ಪರಂಪರೆಗೆ ಅನುಗುಣವಾಗಿ ಸಂಘಟನೆ, ರಾಷ್ಟ್ರಪ್ರಜ್ಞೆ ಇರುವ ಲೇಖಕರ ಬರಹಗಳು ಇದರಲ್ಲಿವೆ.  ಜೀವನ ಮೌಲ್ಯಗಳ ಶಿಕ್ಷಣಕ್ಕೆ ವಿದ್ಯಾಭಾರತಿ ಒತ್ತು ನೀಡುತ್ತದೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾಗೇಶ ಮೇಂಗಜಿ, ‘ಕರ್ನಾಟಕದಲ್ಲಿ 500 ಸಂಸ್ಥೆಗಳು ವಿದ್ಯಾಭಾರತಿಯೊಂದಿಗೆ ಸಂಲಗ್ನತೆ ಹೊಂದಿವೆ. ವ್ಯಕ್ತಿ ನಿರ್ಮಾಣ ಸಮಾಜಕ್ಕೆ ಪೂರಕವಾಗಿ ಇರಬೇಕು. ಅನೇಕ ಕ್ಷೇತ್ರಗಳಲ್ಲಿ ವಿದ್ಯಾಭಾರತಿಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾಭಾರತಿಯ ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಶಿಕ್ಷಕಿಯರು ಭಾಗಿಯಾಗಿದ್ದರು.

ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ವಿದ್ಯಾಭಾರತಿ ವತಿಯಿಂದ ನಡೆದ ಪೂರ್ವ ಛಾತ್ರ ಚ ಪೂರ್ವ ಆಚಾರ್ಯ ಸಮಾವೇಶದಲ್ಲಿ ಸೇರಿದ್ದ ಜನ                            ಪ್ರಜಾವಾಣಿ ಚಿತ್ರ 
ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅಲುಮ್ನಿ ಆಯೋಜಿಸಲಾಗುತ್ತದೆ. ಇದು ವಿದ್ಯಾಸಂಸ್ಥೆಗೆ ಕೊಡುಗೆ ನೀಡುತ್ತದೆ. ಸೇವಾ ಮನೋಭಾವ ಎಲ್ಲರಿಗೂ ಬರಬೇಕು
ಬಸವರಾಜ ದೇಶಮುಖ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ
ದೇಶಾದ್ಯಂತ ವಿದ್ಯಾಭಾರತಿ ಸಂಚಾಲಿತ ಸಂಸ್ಥೆಗಳಲ್ಲಿ 90 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಪ್ರತಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾವೇಶವಾಗಲಿ
ಹರಿಸ್ಮರಣ ರೆಡ್ಡಿ ಪೂರ್ವಛಾತ್ರ ದಕ್ಷಿಣ ಮಧ್ಯಕ್ಷೇತ್ರದ ಸಂಯೋಜಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.