ಕಲಬುರಗಿ: ‘ಅನಧಿಕೃತ ಮರಳು ಗಣಿಗಾರಿಕೆ, ದಾಸ್ತಾನು, ಸಾಗಾಟ ತಡೆಯಲು ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಾಲ್ಲೂಕು ಮರಳು ಸಮಿತಿ ರಚಿಸಲಾಗಿದೆ. ಇವುಗಳಲ್ಲಿ ಕಂದಾಯ, ಪೊಲೀಸ್, ಅರಣ್ಯ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ಗಣಿ ಮತ್ತು ಭೂ ವಿಜ್ಞಾನ, ಆರ್ಟಿಇ ಇಲಾಖೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಸದಸ್ಯ ಬಿ.ಜಿ.ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ‘ಸಮಿತಿಗೆ ಅಧಿಕಾರಿಗಳಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು, ದಂಡ ವಿಧಿಸಿ ವಸೂಲಿ ಮಾಡಲು ಅವಕಾಶ ಇದೆ. ಕಲಬುರಗಿ ಜಿಲ್ಲೆಯಲ್ಲಿ 10, ಯಾದಗಿರಿ ಜಿಲ್ಲೆಯಲ್ಲಿ 2 ತಾತ್ಕಾಲಿಕ ತನಿಖಾ ಠಾಣೆ ತೆರೆಯಲಾಗಿದೆ. ಖನಿಜ ಸಂರಕ್ಷಣಾ ಪಡೆ ಸ್ಥಾಪಿಸಲಾಗಿದೆ’ ಎಂದು ಲಿಖಿತ ಉತ್ತರ ನೀಡಿದ್ದಾರೆ.
‘ಕಲಬುರಗಿ, ಜಿಲ್ಲೆಯ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆ ಅವಕಾಶ ಕೊಟ್ಟಿಲ್ಲ. ಮರಳು ಬ್ಲಾಕ್ಗಳನ್ನು ಗುರುತಿಸಿ ಪರಿಸರ ಅನುಮತಿ ಪತ್ರ ಪಡೆದು ಗುತ್ತಿಗೆ ಅಥವಾ ಕಾರ್ಯಾದೇಶ ಮಂಜೂರು ಮಾಡಲಾಗುತ್ತಿದೆ. ಮರಳು ಗಣಿಗಾರಿಕೆಯಿಂದ ನದಿ ಬರಡಾಗುತ್ತಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.