ADVERTISEMENT

ಹಿನ್ನೀರ ಭೂಸಂತ್ರಸ್ತರಿಗೆ ಪರಿಹಾರ ಮರೀಚಿಕೆ

ಕೋರ್ಟ್ ಆದೇಶಿಸಿದರೂ ಸಿಗದ ಪರಿಹಾರ: ₹2.78 ಕೋಟಿ ಪರಿಹಾರ ಬಾಕಿ

ಸಿದ್ದರಾಜ ಎಸ್.ಮಲಕಂಡಿ
Published 4 ಮಾರ್ಚ್ 2026, 7:30 IST
Last Updated 4 ಮಾರ್ಚ್ 2026, 7:30 IST
   

ವಾಡಿ: ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರ ಗೋಳು ವರ್ಷ ಕಳೆದರೂ ಆಡಳಿತಕ್ಕೆ ಕೇಳಿಸುತ್ತಿಲ್ಲ. ಬ್ಯಾರೇಜ್ ನೀರು ನಿಲುಗಡೆಗೆ ಭೂಮಿ ಕೊಟ್ಟ ರೈತರು ಸಕಾಲಕ್ಕೆ ಪರಿಹಾರ ಮೊತ್ತ ಸಿಗದೆ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಬ್ರಿಡ್ಜ್ ಕಂ ಬ್ಯಾರೇಜ್ ಹಿನ್ನೀರಲ್ಲಿ ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಮಾಡಿ 2 ವರ್ಷ ಕಳೆದರೂ ಪರಿಹಾರ ಮಾತ್ರ ಕೈಸೇರಿಲ್ಲ. ಇದು ನ್ಯಾಯಾಲಯ ಆದೇಶದ ಉಲ್ಲಂಘನೆಯಾಗಿದೆ ಎಂದು ಸಂತ್ರಸ್ತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸನ್ನತಿ, ಕನಗನಹಳ್ಳಿ, ತರಕಸ್ಪೇಟ್, ಗ್ರಾಮಗಳ ಒಟ್ಟು 5 ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ, ರೈತರಿಗೆ ನೀಡಬೇಕಾದ ಹೆಚ್ಚುವರಿ ಪರಿಹಾರಧನ ಬಿಲ್ಲುಗಳ ಪಾವತಿಯ ಕುರಿತು ಕಲಬುರಗಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ 2023ರ ಆದೇಶ ಪ್ರಸ್ತಾಪಿಸಿ ವಿಶೇಷ ಜಿಲ್ಲಾಧಿಕಾರಿಗಳು ಕೃಷ್ಣಾ ಭಾಗ್ಯ ಜಲನಿಗಮದ ಹಣಕಾಸು ವಿಭಾಗದ ಮುಖ್ಯ ಲೆಕ್ಕಾಧಿಕಾರಿಗಳಿಗೆ ಫೆ.2025ರಂದು ಪತ್ರ ಬರೆದು ರೈತರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ADVERTISEMENT

ಒಟ್ಟು ₹2.78 ಕೋಟಿ ಬಾಕಿ: 5 ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹2.78 ಕೋಟಿ ಪರಿಹಾರ ಬಾಕಿ ಇದೆ. ಆದರೆ, ಒಂದು ವರ್ಷ ಕಳೆದರೂ ಪರಿಹಾರ ಮಾತ್ರ ರೈತರ ಕೈಸೇರಿಲ್ಲ ಎನ್ನುವುದು ರೈತರ ಅಳಲಾಗಿದೆ. ನಿಗಮಕ್ಕೆ ಎಲ್ಲಾ ಅಗತ್ಯ ದಾಖಲೆ ಸಲ್ಲಿಸಲಾಗಿದೆ. ಆದರೂ ವರ್ಷ ಕಳೆದರೂ ಬ್ಯಾಂಕ್ ಖಾತೆಗೆ ಪರಿಹಾರ ಬರುತ್ತಿಲ್ಲ. ಇದರಿಂದ ನಾವು ಸಂಕಷ್ಟಕ್ಕೆ ಒಳಗಾಗಿದ್ದೇವೆ ಎನ್ನುತ್ತಾರೆ ಸಂತ್ರಸ್ತ ರೈತರಾದ ಸೋಮಶೇಖರ್ ಹಾಗೂ ವೆಂಕಟೇಶ್ವರರಾವ.

ಪರಿಹಾರ ವಿಳಂಬ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೂ ವಿಳಂಬವಾಗುತ್ತಿದೆ ಎನ್ನುವ ಸಂತ್ರಸ್ತರು, ಕೂಡಲೇ ಹಣ ಪಾವತಿಗೆ ಕ್ರಮ ವಹಿಸಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.