ADVERTISEMENT

ಇತಿಹಾಸದಲ್ಲಿ ಸೂಕ್ತ ಸ್ಥಾನ ಪಡೆಯದ ಫುಲೆ ದಂಪತಿ: ಡಾ.ಗೊಳಸಂಗಿ ಬೇಸರ

ಸಿಯುಕೆ: ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯಲ್ಲಿ ಡಾ.ಗೊಳಸಂಗಿ ಬೇಸರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 12:49 IST
Last Updated 20 ಜನವರಿ 2020, 12:49 IST
ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಕುಲಸಚಿವ ಮುಷ್ತಾಕ್‌ ಅಹ್ಮದ್‌ ಐ.ಪಟೇಲ್‌ ಪುಷ್ಪನಮನ ಸಲ್ಲಿಸಿದರು. ಡಾ.ಅರ್ಜುನ ಗೊಳಸಂಗಿ ಇದ್ದರು 
ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಕುಲಸಚಿವ ಮುಷ್ತಾಕ್‌ ಅಹ್ಮದ್‌ ಐ.ಪಟೇಲ್‌ ಪುಷ್ಪನಮನ ಸಲ್ಲಿಸಿದರು. ಡಾ.ಅರ್ಜುನ ಗೊಳಸಂಗಿ ಇದ್ದರು    

ಕಲಬುರ್ಗಿ:ಇತಿಹಾಸದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಸರಿಪಡಿಸುವುದು ತುಂಬಾ ಕಷ್ಟ. ಜ್ಯೋತಿಬಾಪುಲೆ ಮತ್ತು ಸಾವಿತ್ರಿಬಾಯಿ ಪುಲೆ ಅವರನ್ನು ಇತಿಹಾಸದಲ್ಲಿ ಎಲ್ಲೂ ಸೇರಿಸಲಿಲ್ಲ. ಭಾರತದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಪುಲೆ ಅವರನ್ನು ಇತಿಹಾಸದಲ್ಲಿ ಸೇರಿಸದಿರುವುದಕ್ಕೆ ಅವರು ದಲಿತ ವರ್ಗಕ್ಕೆ ಸೇರಿದವರು ಎಂಬ ಕಾರಣವಿರಬಹುದು ಎಂದು ಹುಲಕೋಟಿಯ ಡಾ. ಅರ್ಜುನ್ ಗೊಳಸಂಗಿ ಹೇಳಿದರು.

ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಾತಾ ಸಾವಿತ್ರಿಬಾಯಿ ಪುಲೆ ಅವರ ಜಯಂತ್ಯುತ್ಸವ ಕುರಿತು ಅವರು ಮಾತನಾಡಿದರು.

ಜ್ಯೋತಿಬಾ ಪುಲೆ ದಂಪತಿ ದೇಹ ಎರಡು ಆತ್ಮ ಒಂದೇ ಎಂಬಂತೆ ಬದುಕಿದರಲ್ಲದೆ ಸಾಮಾಜಿಕ ಬದಲಾವಣೆಗೆ ಒಟ್ಟಾಗಿ ದುಡಿದರು. ಪೇಶ್ವೆಗಳ ಆಳ್ವಿಕೆಯ ಕಾಲದಲ್ಲಿ ಸುಮಾರು 18 ಶಾಲೆಗಳನ್ನು ತೆರೆದು ಹಸಿವು ಹಾಗೂ ಬಡತನದಿಂದ ನೊಂದ ದಲಿತ ಜನಾಂಗಕ್ಕೆ ಅನ್ನ ದಾನ ಮತ್ತು ಶಿಕ್ಷಣ ದಾನ ಮಾಡಿದರು. ಅಂದಿನ ಸಾಮಾಜಿಕ ಪರಿಸ್ಥಿತಿ ಜಡ್ಡುಗಟ್ಟಿದಂತಿದ್ದು, ಕೇವಲ ಮೇಲ್ವರ್ಗದ ಗಂಡು ಮಕ್ಕಳು ಮಾತ್ರ ಶಿಕ್ಷಣದ ಹಕ್ಕನ್ನು ಪಡೆದಿದ್ದರು. ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ, ಸತಿ ಸಹಗಮನ, ಶಿಕ್ಷಣದಿಂದ ವಂಚನೆ ಹೀಗೆ ಅನೇಕ ರೀತಿಯ ತುಳಿತಕ್ಕೆ ಒಳಪಡಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಪ್ರತಿರೋಧಕ್ಕೆ ಎದೆಗುಂದದೇ ಹೆಣ್ಣು ಮಕ್ಕಳ ಶಿಕ್ಷಣ, ಬಾಲ್ಯ ವಿವಾಹ, ಅಸ್ಪೃಶ್ಯತೆ, ದೇವದಾಸಿ ಹಾಗೂ ಸತಿ ಸಹಗಮನ ಪದ್ಧತಿ ನಿರ್ಮೂಲನೆಗಾಗಿ ಅವಿರತರಾಗಿ ಶ್ರಮಿಸಿದರು. ಹೆಣ್ಣು ಮಕ್ಕಳಿಗೆ ವರದಕ್ಷಿಣೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಡುವ ಬದಲು ಅದೇ ಹಣವನ್ನು ಅವರ ಶಿಕ್ಷಣಕ್ಕಾಗಿ ವ್ಯಯಿಸುವ ಮೂಲಕ ಅವರು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡಬೇಕಾದ ಅವಶ್ಯಕತೆಯಿದೆ ಎಂದು ಗೊಳಸಂಗಿ ಹೇಳಿದರು.

ADVERTISEMENT

ಸಹಕುಲಪತಿ ಪ್ರೊ.ಜಿ.ಆರ್.ನಾಯಕ್, ಕುಲಸಚಿವ ಪ್ರೊ. ಮುಸ್ತಾಕ್ ಅಹ್ಮದ್ ಐ. ಪಟೇಲ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಬಿ.ಆರ್. ಕೆರೂರ್, ವಿತ್ತಾಧಿಕಾರಿ ಶಿವಾನಂದಂ, ಎಲ್ಲಾ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಸೀಮಾ ಶಾಸ್ತ್ರಿ ನಿರೂಪಿಸಿದರೆ, ರಕ್ಷಂದಾ ಸ್ವಾಗತಿಸಿದರು, ಭಾಗ್ಯಶ್ರೀ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.