ಸೇಡಂ: ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾನುವಾರ ಭೇಟಿ ನೀಡಿದರು.
ತಾಲ್ಲೂಕಿನ ಅಳ್ಳೊಳ್ಳಿ ಮತ್ತು ಕಲಕಂಭ ಗ್ರಾಮದ ರೈತರ ಹೊಲಗಳಿಗೆ ತೆರಳಿದ ಅವರು ಹೆಸರು ಕಾಯಿ ಒಣಗಿ ಬೆಳ್ಳಗಾಗಿರುವುದನ್ನು ವೀಕ್ಷಿಸಿದರು. ತೊಗರಿ ಬೆಳೆಯೂ ಒಣಗಿರುವ ಕುರಿತು ರೈತರು ವಿವರಿಸಿದರು.
‘ಹೆಸರು ಕಾಯಿ ಹೊಲದಲ್ಲಿದೆ. ನಿರಂತರ ಮಳೆಯಿಂದಾಗಿ ರಾಶಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ರೈತರು ಅಸಹಾಯಕತೆ ತೋಡಿಕೊಂಡರು.
‘ನಿರಂತರ ಮಳೆಯಿಂದಾಗಿ ತೊಗರಿ ಬೆಳೆಯ ಬೇರುಗಳು ಒಣಗಿದ್ದು, ತೊಗರಿ ನೆಲಕ್ಕುರುಳಿದೆ. ಅಲ್ಲದೆ, ಅಲ್ಲಲ್ಲಿ ನೆಟೆ ರೋಗದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ಅಳಲು ತೋಡಿಕೊಂಡರು.
ರೈತರ ಸಮಸ್ಯೆಗಳನ್ನು ಹಾಗೂ ಅವರ ಅಭಿಪ್ರಾಯಗಳನ್ನು ಸ್ವೀಕರಿಸಿದ ಸಚಿವರು ಜೊತೆಯಲ್ಲಿದ್ದ ಕೃಷಿ ಅಧಿಕಾರಿಗಳಿಗೆ ಬೆಳೆ ಹಾನಿ ಬಗ್ಗೆ ಪ್ರಾಥಮಿಕ ವರದಿ ನೀಡುವಂತೆ ಸೂಚನೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ರೇವಗೊಂಡ, ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ತಾ.ಪಂ ಇಒ ಚನ್ನಪ್ಪ ರಾಯಣ್ಣನವರ್, ಕೃಷಿ ಇಲಾಖೆ ಕೃಷಿ ನಿರ್ದೇಶಕಿ ಅನುಸೂಯ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ವಿಶಾಲಕುಮಾರ್, ಕೃಷಿ ಅಧಿಕಾರಿ ಪ್ರಕಾಶ ರಾಠೋಡ, ಹೇಮಾರೆಡ್ಡಿ ಕಲಮಂಕ, ಜಗದೇವಯ್ಯ ಭಂಡಾ ಹಾಗೂ ಉಮಾರೆಡ್ಡಿ ಹಂದರಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.